ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಬಿಎಸ್ವೈ ಭೇಟಿ ನಂತರ ಮಾಧ್ಯಮದವರೊಂದಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಯಡಿಯೂರಪ್ಪ ನಮ್ಮ ಸಮಾಜದ ಹಿರಿಯರಾಗಿದ್ದಾರೆ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಸಮಾಜದ ಬಗ್ಗೆಯೂ ಅವರ ಜತೆ ಚರ್ಚೆ ಮಾಡಿದ್ದೇನೆ. ಇದು ಒಂದು ಸೌಹಾರ್ದಯುತ ಭೇಟಿಯಾಗಿದೆ ಎಂದು ತಿಳಿಸಿದರು.
ಬಿಎಸ್ವೈ ಭೇಟಿಯಲ್ಲಿ ರಾಜಕೀಯದ ವಿಚಾರ ಇರಲಿಲ್ಲ. ರಾಜಕಾರಣಕ್ಕೂ ಈ ಭೇಟಿಗೂ ಸಂಬಂಧ ಇಲ್ಲ. ಕೆಲವೊಂದು ವಿಚಾರಗಳ ಬಗ್ಗೆ ಅವರ ಸಲಹೆ ಪಡೆಯಲು ಬಂದಿದ್ದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುಂದಿನ ವಾರ ಸೂಕ್ತ ಪೀಠದಲ್ಲಿ ಹಿಜಬ್ ಅರ್ಜಿ ವಿಚಾರಣೆ – ಸುಪ್ರೀಂಕೋರ್ಟ್
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಳಂಬ ವಿಚಾರದ ಬಗ್ಗೆಯೂ ಯಡಿಯೂರಪ್ಪ ಬಳಿ ಚರ್ಚೆ ಮಾಡಿದ್ದೇನೆ. ತಾಂತ್ರಿಕ ಕಾರಣಕ್ಕೆ ಮೀಸಲಾತಿ ವಿಳಂಬ ಆಗಿದೆ. ಬೊಮ್ಮಾಯಿ ಅವರು ಬೇರೆ ಸಮುದಾಯಗಳಿಗೆ ತೊಂದರೆ ಆಗದಂತೆ ಮೀಸಲಾತಿ ಕೊಡುವ ಭರವಸೆ ನೀಡಿದ್ದಾರೆ. ಈ ಅವಧಿಯಲ್ಲೇ ಮೀಸಲಾತಿ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಶಿವಕುಮಾರೋತ್ಸವಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮೋತ್ಸವವನ್ನು ನಾವೆಲ್ಲರೂ ಸೇರಿ ಮಾಡುತ್ತಿದ್ದೇವೆ. ಸಿದ್ದರಾಮೋತ್ಸವ ಕಮಿಟಿಯಲ್ಲಿ ನಾನೂ ಇದ್ದೀನಿ. 75 ವರ್ಷ ಅನ್ನೋದು ಒಬ್ಬ ರಾಜಕಾರಣಿಗೆ ಸಾರ್ಥಕತೆ ತರುವ ವಯಸ್ಸಾಗಿದೆ. ಆದರೆ ಶಿವಕುಮಾರೋತ್ಸವ ಮಾಡಿ ಅಂತ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ