ಬೆಂಗಳೂರು: ಕಾಂಗ್ರೆಸನ್ನ ಸೋಲಿಸಲು ಕಾಂಗ್ರೆಸಿಗರಿಂದ ಮಾತ್ರ ಸಾಧ್ಯ. ನಾಯಕರ ನಡುವಿನ ಒಗ್ಗಟ್ಟಿನ ಕೊರತೆಯೆ ಕಾಂಗ್ರೆಸ್ ಪರಿಸ್ಥಿತಿಗೆ ಕಾರಣ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆಬಿ ಕೋಳಿವಾಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಿಂತ ನೀರಾಗಿದ್ದು, ಪಕ್ಷದ ಚಟುವಟಿಕೆಗಳು ಕುಂಠಿತವಾಗಿದೆ. ಅತ್ತ ಕಡೆ ರಾಜೀನಾಮೆ ಅಂಗೀಕಾರವೇ ಆಗಿಲ್ಲ, ತಿರಸ್ಕಾರವೂ ಆಗಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಅಂತಾರೆ ನಾಯಕರು. ಆದರೆ ತಾವೇ ಹೈಕಮಾಂಡ್ ಗೆ ಹೋಗಿ ಕಂಡಿಷನ್ ಹಾಕಿ ಬರ್ತಾರೆ. ಇಂಥವರೇ ಅಧ್ಯಕ್ಷರಾಗಬೇಕು, ಇಂಥವರೇ ಕಾರ್ಯಾಧ್ಯಕ್ಷ ಆಗಬೇಕು ಅಂತಾರೆ.
ಏನೇ ಕಂಡಿಷನ್ ಹಾಕಿ ಬಂದಿರಲಿ, ಆದರೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು. ಮಲ್ಲಿಕಾರ್ಜುನ ಖರ್ಗೆ ಎಲ್ಲದಕ್ಕೂ ಲೀಡ್ ತೆಗೆದುಕೊಳ್ಳಬೇಕು. ಪಕ್ಷದ ಹಿತದೃಷ್ಟಿಯಿಂದ ನಾನು ಎಲ್ಲ ನಾಯಕರನ್ನು ಭೇಟಿ ಮಾಡ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಾಯಕರೆಲ್ಲ ಒಗ್ಗಟ್ಟು ಪ್ರದರ್ಶಿಸಿ, ಒಮ್ಮತದ ಧ್ವನಿಯನ್ನು ಹೈಕಮಾಂಡ್ ಗೆ ತಿಳಿಸಿ. ಭಿನ್ನಮತದ ಧ್ವನಿಯನ್ನು ಎಲ್ಲರೂ ಮರೆಯಬೇಕು ಎಂದು ಸಲಹೆ ನೀಡಿದರು.
ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸ್ ನಲ್ಲಿದ್ದರೆ ಪ್ರಯೋಜನವಿಲ್ಲ. ಪಕ್ಷದ ಹಿತಕ್ಕಾಗಿ ನಾಯಕರು ತ್ಯಾಗ ಮಾಡಬೇಕಿದೆ. ಒಬ್ಬೊಬ್ಬರು ಒಂದೊಂದು ಗುಂಪು ಮಾಡಿಕೊಂಡು ಲಾಬಿ ಮಾಡಿದ್ದಾರೆ. ಒಬ್ಬರು ಒಂದು ಕಡೆ ಜಗ್ಗಿದರೆ, ಇನ್ನೊಬ್ಬರು ಇನ್ನೊಂದು ಕಡೆ ಜಗ್ಗುತ್ತಿದ್ದಾರೆ. ಲಾಬಿ ಮಾಡಿದವರೆಲ್ಲ ನಿಜವಾದ ಕಾಂಗ್ರೆಸ್ ನಾಯಕರಾದರೆ ಹೈಕಮಾಂಡ್ ಗೆ ಒಮ್ಮತದ ಅಭಿಪ್ರಾಯ ಹೇಳಬೇಕು. ದೊಡ್ಡ ಮನುಷ್ಯರು ಎಂದು ಹೇಳಿಕೊಳ್ಳುವವರು ಕಾಂಗ್ರೆಸ್ ಬಿಟ್ಟು ಹೋಗಲಿ ನೋಡೋಣ. ದೆಹಲಿಯಲ್ಲಿ ಎಲ್ಲರೂ ತಮ್ಮದೇ ಲಾಬಿ ಮಾಡಿ ಬಂದಿದ್ದಾರೆ. ಲಾಬಿಯನ್ನ ಬಿಟ್ಟು ಎಲ್ಲರ ಒಟ್ಟಾಬಿಪ್ರಾಯಕ್ಕೆ ಒತ್ತು ನೀಡಬೇಕು. ಕೆಲವರು ತಂಡ ಕಟ್ಟಿಕೊಂಡು ಅಭಿಪ್ರಾಯ ನೀಡಿ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.