ಬೆಂಗಳೂರು/ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ನಡುವೆ ಈಗ ಹೊಸ ಕಾಳಗಕ್ಕೆ ವೇದಿಕೆ ಸಿದ್ದವಾಗಿದೆ. ತಮ್ಮ ವಿಧಾನಸಭಾ ಕ್ಷೇತ್ರ ಕನಕಪುರವನ್ನು (Kanakapura) ರಾಮನಗರದಿಂದ ಪ್ರತ್ಯೇಕಿಸಿ ಬೆಂಗಳೂರಿಗೆ (Bengaluru) ಸೇರಿಸಲು ಡಿಕೆಶಿ ಮುಂದಾಗುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಕನಕಪುರವನ್ನು ರಾಮನಗರ (Ramanagara) ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರಿಗೆ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಯಾರೋ ಹೆಸರಿಗಾಗಿ ಕನಕಪುರವನ್ನು ರಾಮನಗರಕ್ಕೆ ಸೇರಿಸಿದ್ದಾರೆ ಎನ್ನುವ ಮೂಲಕ ಕುಮಾರಸ್ವಾಮಿ ಅವರನ್ನು ಮಧ್ಯೆ ಎಳೆ ತಂದಿದ್ದಾರೆ.
ಇಷ್ಟು ದಿನ ಕುಮಾರಸ್ವಾಮಿ ವರ್ಸಸ್ ಡಿ.ಕೆ.ಶಿವಕುಮಾರ್ ನಡುವೆ ರಾಮನಗರ ಜಿಲ್ಲಾ ರಾಜಕಾರಣದ ವಿಚಾರದಲ್ಲಿ ಫೈಟ್ ನಡೆಯುತ್ತಿತ್ತು. ರಾಜ್ಯ ಮಟ್ಟದಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಜಟಾಪಟಿಯೂ ನಡೆದಿತ್ತು. ಈಗ ರಾಮನಗರ ಜಿಲ್ಲೆಯಿಂದ ಕನಕಪುರ ಹೊರಗಿಡುವ ಡಿಕೆಶಿ ಪ್ರಯತ್ನ ಇಬ್ಬರ ನಡುವೆ ಇನ್ನೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿದೆ.
ಕನಕಪುರವನ್ನು ರಾಮನಗರ ಜಿಲ್ಲಾ ವ್ಯಾಪ್ತಿಯಿಂದ ಹೊರತಂದು ಬೆಂಗಳೂರು ವ್ಯಾಪ್ತಿಗೆ ಸೇರಿಸುವ ಪ್ರಯತ್ನಕ್ಕೆ ಮುಂದಾದರೆ ದೊಡ್ಡ ಮಟ್ಟದ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ತಮ್ಮ ಖಜಾನೆ ವೃದ್ಧಿಗೆ ಕನಕಪುರ ಹೆಸರು ಹೇಳಿ ಹೊಸ ನಾಟಕ ಶುರು ಮಾಡಿದ್ದಾರೆ: ಡಿಕೆಶಿ ವಿರುದ್ಧ ಹೆಚ್ಡಿಕೆ ಗುಡುಗು
ರಾಮನಗರ ಜಿಲ್ಲೆ ಅಂದರೆ ಅದು ಹೆಚ್ಡಿಕೆ ಹೆಸರು ಮೊದಲು ಬರುತ್ತದೆ. ಹೀಗಾಗಿ ಜಿಲ್ಲಾ ಕೇಂದ್ರ ಮೀರಿ ಬೆಂಗಳೂರಿನ ಹೆಚ್ಚುವರಿ ಬೆಳವಣಿಗೆಗೆ ಕನಕಪುರ ಹಬ್ ಮಾಡಲು ಡಿಕೆಶಿ ಪ್ಲ್ಯಾನ್ ಮಾಡಿದ್ದಾರಾ ಎಂಬ ಚರ್ಚೆ ಈಗ ಶುರುವಾಗಿದೆ.
ಡಿಕೆ ಲೆಕ್ಕಾಚಾರ ಏನು?
ಬೆಂಗಳೂರು ಹೊರತುಪಡಿಸಿ 2ನೇ ಹಂತದ ನಗರವಾಗಿ ಕನಕಪುರಕ್ಕೆ ಆದ್ಯತೆ ನೀಡುವುದು. ಕನಕಪುರದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗುವ ಮೂಲಕ ಪ್ರಾದೇಶಿಕವಾಗಿ ಅಭಿವೃದ್ಧಿಗೆ ಒತ್ತು ನೀಡುವುದು.
ಶೈಕ್ಷಣಿಕ ಹಬ್ ಸ್ಥಾಪನೆಯ ಜೊತೆಗೆ ನೀರಾವರಿ ಸೌಲಭ್ಯದ ಕಾರಣ ನೀಡಿ ಅಭಿವೃದ್ಧಿ ಕಾರ್ಯ ನಡೆಸುವುದು. ಕೊನೆಗೆ ಉದ್ಯಮ ಹೂಡಿಕೆಗೆ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ಡಿಕೆ ಮುಂದಾಗುತ್ತಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
Web Stories