ಕನ್ನಡದ ಹೆಸರಾಂತ ಜೀ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ಶೋ ಸರಿಗಮಪ (Saregamapa)ಗ್ರ್ಯಾಂಡ್ ಫಿನಾಲೆ ತಲುಪಿದೆ. ಈ ಬಾರಿಯ ಫಿನಾಲೆಯಲ್ಲಿ ಯಾದಗಿರಿ (Yadagiri) ಜಿಲ್ಲಾ ಮೈದಾನದಲ್ಲಿ ನಡೆಸಲು ವಾಹಿನಿ ತೀರ್ಮಾನ ತಗೆದುಕೊಂಡಿತ್ತು. ಅಂದುಕೊಂಡಂತೆ ಆಗಿದ್ದರೆ, ನಿನ್ನೆ ರಾತ್ರಿ ಫಿನಾಲೆ ಮುಗಿದು, ವಿಜೇತರ ಕೈಯಲ್ಲಿ ಟ್ರೋಫಿ ಇರಬೇಕಿತ್ತು. ಇನ್ನೇನು ಕಾರ್ಯಕ್ರಮ ಶುರುವಾಗಬೇಕು ಆಗ ವಾಹಿನಿಯ ಪ್ರತಿನಿಧಿ ಕಾರ್ಯಕ್ರಮ ರದ್ದಾಗಿರುವ ಕುರಿತು ಪ್ರಕಟನೆ ನೀಡಿ ಅಭಿಮಾನಿಗಳನ್ನು ನಿರಾಸೆ ಮಾಡಿದ್ದಾರೆ.
ಅಷ್ಟಕ್ಕೂ ಕಾರ್ಯಕ್ರಮ ದಿಢೀರ್ ಅಂತ ರದ್ದಾಗಲು ತಾಂತ್ರಿಕ ಕಾರಣವನ್ನು ನೀಡಲಾಗುತ್ತಿದೆ. ವಾಹಿನಿಯ ಪ್ರತಿನಿಧಿಯು ವೇದಿಕೆಯ ಮೇಲೆ ತಾಂತ್ರಿಕ ಕಾರಣವನ್ನೇ ನೀಡಿದ್ದಾರೆ. ಆದರೆ, ಕಾರ್ಯಕ್ರಮ ರದ್ಧಾಗಲು ಬೇರೆಯದ್ದೇ ಕಾರಣವನ್ನು ನೀಡಲಾಗುತ್ತಿದೆ. ಕಾರ್ಯಕ್ರಮವನ್ನು ಯಾದಗಿರಿಯಲ್ಲಿ ನೆಡೆಸಲು ಪೊಲೀಸರು ಪರ್ಮಿಷನ್ ಕೊಟ್ಟ ನಂತರವೂ ರದ್ಧಾದ ಕಾರಣದಿಂದಾಗಿ ಸಾಕಷ್ಟು ಅನುಮಾನ ಮೂಡಿದೆ.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಬೇಕಿತ್ತು. ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿಯೇ ಸಚಿವ ದಿನೇಶ್ ಗುಂಡೂರಾವ್ ಯಾದಗಿರಿಗೆ ಬಂದಿಳಿದಿದ್ದರು. ವಾಹಿನಿಯ ಮುಖ್ಯಸ್ಥರು, ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಅರ್ಜುನ್ ಜನ್ಯ ಗಾಯಕರಾದ ವಿಜಯ್ ಪ್ರಕಾಶ್, ನಿರೂಪಕಿ ಅನುಶ್ರೀ, ಶೋ ಸ್ಪರ್ಧಿಗಳು, ಹೆಸರಾಂತ ಗಾಯಕ ಗಾಯಕಿಯರ ತಂಡವೇ ಕಾರ್ಯಕ್ರಮದಲ್ಲಿ ಭಾಗಿ ಆಗಬೇಕಿತ್ತು. ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಮೈದಾನದಲ್ಲಿ ಸೇರಿದ್ದರು. ಈ ಅಪಾರ ಪ್ರಮಾಣದಲ್ಲಿ ಸೇರಿದ ಜನರೇ ಕಾರ್ಯಕ್ರಮ ರದ್ದಿಗೆ ಕಾರಣರಾದರು ಎನ್ನುವುದು ಇನ್ ಸೈಡ್ ಸ್ಟೋರಿ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದಿಂದ ಬೆಚ್ಚಿ ಬಿದ್ದಿರುವ ಪೊಲೀಸ್ ಇಲಾಖೆ, ಆತನ ಹುಡುಕಾಟದಲ್ಲಿ ತಲೆ ಕೆಡಿಸಿಕೊಂಡು ಕೂತಿದೆ. ಶಂಕಿತ ವ್ಯಕ್ತಿಯು ಬಳ್ಳಾರಿಯಿಂದ ಯಾದಗಿರಿಯತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಕಾರಣದಿಂದಾಗಿ ರಾಜ್ಯ ಗುಪ್ತಚರ ( Intelligence Department) ಇಲಾಖೆಯು ಕಾರ್ಯಕ್ರಮ ರದ್ದು ಮಾಡುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ದಿಢೀರ್ ಅಂತ ಕಾರ್ಯಕ್ರಮ ನಿಲ್ಲಿಸಲಾಗಿದೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.