ಕಲಬುರಗಿ: ವರ್ಗಾವಣೆ ಮಾಡಿದ್ದಕ್ಕೆ ಮನನೊಂದು ಪೇದೆ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಕಲಬುರಗಿ ಹೊರವಲಯದ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.
ಕಲಬುರಗಿ ವಿವಿ ಠಾಣೆಯ ಪೇದೆ ಸಂತೋಷ್ ಚವ್ಹಾನ್ ಆತ್ಮಹತ್ಯೆಗೆ ಯತ್ನಿಸಿದ ಪೇದೆ. ಸಂತೋಷ್ ಅವರ ಮೇಲೆ ಮಟ್ಕಾ ದಂಧೆಯಲ್ಲಿ ಹಫ್ತಾ ವಸೂಲಿ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂತೋಷ್ ಅವರನ್ನು ಚಿಂಚೋಳಿ ತಾಲೂಕಿನ ಕೊಂಚಾವರಂ ಠಾಣೆಗೆ ವರ್ಗಾವಣೆಗೊಳಿಸಿದ್ದರು.
ಇದರಿಂದ ಮನನೊಂದು ಸಂತೋಷ್ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಸಂತೋಷ್ ಅವರನ್ನ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಎಸ್ಪಿ ಎನ್ ಶಶಿಕುಮಾರ್ ಭೇಟಿ ನೀಡಿ ಸಂತೋಷ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಬಗ್ಗೆ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.