ಮುಂಬೈ: ಬೆಂಗಳೂರು ಮತ್ತು ಕೋಲ್ಕತ್ತಾ ನಡುವಿನ ಕೊನೆಯ ಓವರ್ ವರೆಗೂ ರೋಚಕವಾಗಿ ಕೂಡಿದ ಪಂದ್ಯದಲ್ಲಿ ಬ್ಯಾಟ್ಸ್ಮ್ಯಾನ್ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶ್ ಮಾಡುವ ಮೂಲಕ ಆರ್ಸಿಬಿಗೆ 3 ವಿಕೆಟ್ಗಳ ಗೆಲುವು ತಂದುಕೊಟ್ಟರು.
ಆರ್ಸಿಬಿಗೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 7 ರನ್ಗಳ ಅವಶ್ಯಕತೆ ಇತ್ತು. ರಸೆಲ್ ಎಸೆದ ಮೊದಲ ಎಸೆತವನ್ನೆ ದಿನೇಶ್ ಕಾರ್ತಿಕ್ ಸಿಕ್ಸರ್ಗಟ್ಟಿದರೆ, ಎರಡನೇ ಎಸೆತವನ್ನು ಬೌಂಡರಿಗಟ್ಟಿ ಆರ್ಸಿಬಿ ತಂಡವನ್ನು ಗೆಲ್ಲಿಸಿದರು.
ಅಲ್ಪ ಮೊತ್ತದ ಗುರಿ ಪಡೆದ ಆರ್ಸಿಬಿ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಅನುಜ್ ರಾವತ್ ಶೂನ್ಯ ಸುತ್ತಿದರೆ, ನಾಯಕ ಡು ಪ್ಲೆಸಿಸ್ 5 ರನ್ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 18 ರನ್ (28 ಎಸೆತ, 3 ಬೌಂಡರಿ) ಮತ್ತು ಡೇವಿಡ್ ವಿಲ್ಲಿ 18 ರನ್ (38 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈ ಚೆಲ್ಲಿದರು.
ನಂತರ ಶಹಬಾಜ್ ಅಹಮದ್ 27 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ದಿನೇಶ್ ಕಾರ್ತಿಕ್ ಅಜೇಯ 14 ರನ್ (7 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಹರ್ಷಲ್ ಪಟೇಲ್ 10 ರನ್ (6 ಎಸೆತ, 2 ಬೌಂಡರಿ) ಸಿಡಿಸಿ 19.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಸಿಡಿಸಿ 4 ಎಸೆತ ಬಾಕಿ ಇರುವಂತೆ 3 ವಿಕೆಟ್ಗಳ ಗೆಲುವು ದಾಖಲಿಸಿತು.
ಈ ಮೊದಲು ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಪ್ಲೆಸಿಸ್ ಪ್ಲಾನ್ ಪ್ರಕಾರ ಬೌಲರ್ಗಳು ಆರಂಭದಲ್ಲೇ ಕೆಕೆಆರ್ ಬ್ಯಾಟ್ಸ್ಮ್ಯಾನ್ಗಳನ್ನು ಕಾಡಿದರು.
ಆರ್ಸಿಬಿ ಬೌಲರ್ಗಳ ಬಿಗಿ ದಾಳಿ
ಕೋಲ್ಕತ್ತಾ ತಂಡ ಆರಂಭದಿಂದಲೇ ವಿಕೆಟ್ ಕೈ ಚೆಲ್ಲಿ ಆಘಾತಕ್ಕೆ ಒಳಗಾಯಿತು. ಅಜಿಂಕ್ಯಾ ರಹಾನೆ 9, ವೆಂಕಟೇಶ್ ಅಯ್ಯರ್ 10, ಶ್ರೇಯಸ್ ಅಯ್ಯರ್ 13, ನಿತೇಶ್ ರಾಣಾ 10, ಸುನೀಲ್ ನರೇನ್ 12, ಸ್ಯಾಮ್ ಬಿಲ್ಲಿಂಗ್ಸ್ 14 ರನ್ ಸಿಡಿಸಿ ಅಗ್ರ ಕ್ರಮಾಂಕದ ಬ್ಯಾಟ್ಸ್ಮ್ಯಾನ್ಗಳು ಕೆಕೆಆರ್ಗೆ ಕೈ ಕೊಟ್ಟರು.
ಆರ್ಸಿಬಿ ಪರ ಭರ್ಜರಿ ದಾಳಿ ಸಂಘಟಿಸಿದ ವನಿಂದು ಹಸರಂಗ ಡಿ ಸಿಲ್ವ 4 ವಿಕೆಟ್ ಮತ್ತು ಆಕಾಶ್ ದೀಪ್ 3 ವಿಕೆಟ್ ಕಿತ್ತು ಕೆಕೆಆರ್ಗೆ ಮುಳುವಾದರು. ಒಂದು ಹಂತದಲ್ಲಿ ನೂರು ರನ್ ಗಳಿಸಲು ಪರದಾಡುತ್ತಿದ್ದ ಕೆಕೆಆರ್ಗೆ ಆಂಡ್ರೆ ರಸೆಲ್ ಚೇತರಿಕೆ ನೀಡಿದರು. ಕೆಲ ಹೊತ್ತು ಬೌಂಡರಿ, ಸಿಕ್ಸ್ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು. ಆದರೆ ಈ ರಂಜನೀಯ ಆಟ 25 ರನ್ (18 ಎಸೆತ, 1 ಬೌಂಡರಿ, 3 ಸಿಕ್ಸ್ಗೆ ಕೊನೆಗೊಂಡಿತು.
ಕೊನೆಗೆ ಉಮೇಶ್ ಯಾದವ್ 18 ರನ್ (12 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 120ರ ಗಡಿದಾಟಿಸಿದರು. ಅಂತಿಮವಾಗಿ 18.5 ಓವರ್ಗಳ ಅಂತ್ಯಕ್ಕೆ 128 ರನ್ಗಳಿಗೆ ಕೆಕೆಆರ್ ಗಂಟುಮೂಟೆ ಕಟ್ಟಿತು.