ಹೈದರಾಬಾದ್: ಅಣ್ಣನ ಶಾಲಾ ಬಸ್ಸಿನಡಿ ಸಿಲುಕಿ 18 ತಿಂಗ್ಳು(ಒಂದೂವರೆ ವರ್ಷದ) ಹೆಣ್ಣು ಮಗು ದಾರುಣವಾಗಿ ಮೃತಪಟ್ಟ ಘಟನೆ ಹೈದಾರಾಬಾದ್ ನ ಬೊಂಗ್ಳೂರು ಎಂಬಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ಮೃತ ದುರ್ದೈವಿ ಕಂದಮ್ಮನನ್ನು ಪ್ರತೀಕಾ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಸತ್ತಯ್ಯನನ್ನು ಆದಿಭಟ್ಲಾ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಪ್ರತೀಕಾ, ಬೊಂಗ್ಳೂರು ಅಂತಪುರಂ ಕಾಲೊನಿಯ ವೆಂಕಟೇಶ್ ಹಾಗೂ ಚಂದನ ದಂಪತಿಯ ಪುತ್ರಿ. ಈಕೆಯ ಅಣ್ಣ ಪ್ರಜ್ವಲ್, ಬೊಂಗ್ಳೂರು ಸಾಹಿತಿ ವಿದ್ಯಾಲಯ ನರ್ಸರಿ ಶಾಲೆಗೆ ಹೋಗುತ್ತಿದ್ದಾನೆ ಅಂತ ಆದಿಭಟ್ಳಾ ಸಬ್ ಇನ್ಸ್ ಪೆಕ್ಟರ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಚಂದನ, ಪ್ರಜ್ವಲ್ ಹಾಗೂ ಪ್ರತೀಕಾ ಮನೆಯ ಹತ್ತಿರವೇ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಬಸ್ ಬಂದಿದೆ. ಬಸ್ ಬಂದ ಕೂಡಲೇ ಅದರಲ್ಲಿದ್ದ ಆಯ ಕೆಳಗಿಳಿದು ಪ್ರಜ್ವಲ್ ನನ್ನು ಬಸ್ ಗೆ ಹತ್ತಿಸಿದ್ದಾರೆ. ಇತ್ತ ತಾಯಿ ಮಗನ ಬ್ಯಾಗ್ ಹಿಡಿದುಕೊಂಡಿದ್ದು, ಅದನ್ನು ಆತನಿಗೆ ಕೊಡುವಲ್ಲಿ ನಿರತರಾಗಿದ್ದರು. ಹೀಗಾಗಿ ಮಗಳು ಪ್ರತೀಕಾ ಕಡೆ ಅವರು ಗಮನಹರಿಸಿರಲಿಲ್ಲ. ಪರಿಣಾಮ ಪ್ರತೀಕಾ ಬಸ್ ನ ಮುಂದುಗಡೆ ತೆರಳಿದ್ದಾಳೆ. ಇದನ್ನು ಚಾಲಕ ಕೂಡ ಗಮನಿಸಿರಲಿಲ್ಲ. ಅಲ್ಲದೇ ಬಸ್ಸನ್ನು ಏಕಾಏಕಿ ಚಲಾಯಿಸಿದ್ದಾನೆ. ಈ ವೇಳೆ ಬಸ್ ಮುಂಬದಿಯಿದ್ದ ಪ್ರತೀಕಾ ಬಸ್ಸಿನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಅಂತ ಎಸ್ಐ ವಿವರಿಸಿದ್ದಾರೆ.
ಮಗು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಚಾಲಕ ಬಸ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಆರೋಪಿ ಚಾಲಕನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದ್ದರು.
ತಲೆಮರೆಸಿಕೊಂಡಿದ್ದ ಚಾಲಕನನ್ನು ಕೊನೆಗೂ ಆದಿಭಟ್ಲಾ ಪೊಲೀಸರು ಬಂಧಿಸಿದ್ದಾರೆ. ಚಾಲಕ ಸತ್ತಯ್ಯನ ಜೊತೆ ಲೈಸನ್ಸ್ ಇದ್ದು, ಘಟನೆ ನಡೆದ ವೇಳೆ ಆತ ಮದ್ಯಪಾನ ಮಾಡಿರಲಿಲ್ಲ ಅಂತ ತಿಳಿಸಿದ್ದಾರೆ. ಸದ್ಯ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 304- ಎ(ವೇಗದ ಚಾಲನೆ ಅಥವಾ ಅಜಾಗರೂಕತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv