ಬೆಂಗಳೂರು: ನಮಗೇ ಕುಡಿಯೋಕೆ ನೀರಿಲ್ಲ, ಹಾಗಿದ್ದಾಗ 3,500 ಸಾವಿರ ಕ್ಯೂಸೆಕ್ ನೀರು ಕೊಡಿ ಅಂದ್ರೆ ಹೇಗೆ? ಎಂದು ಡಿಸಿಎಂ ಪರಮೇಶ್ವರ್ (G Parameshwar)ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಕಾವೇರಿ ನೀರು (Cauvery River) ತಮಿಳುನಾಡಿಗೆ (Tamilnadu) ಹರಿಸುವ ವಿಚಾರವಾಗಿ ಮಾತನಾಡಿದ ಅವರು, ನಮಗೇ ಕುಡಿಯಲು ನೀರಿಲ್ಲ. ಹಾಗಿದ್ದಾಗ 3,500 ಸಾವಿರ ಕ್ಯೂಸೆಕ್ ನೀರು ಕೊಡಿ ಅಂದ್ರೆ ಹೇಗೆ? ಇದರ ಬಗ್ಗೆ ಚರ್ಚೆಗೆ ಸಿಎಂ ಸರ್ವಪಕ್ಷದ ಸಭೆ ಕರೆಯುತ್ತಾರೆ. ಸೋಮವಾರ (ಆ.3) ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಬರ್ತಾರೆ, ಅವರ ಜೊತೆಗೂ ಸಿಎಂ ಚರ್ಚೆ ಮಾಡಬಹುದು. ಇವತ್ತು ರಾಮಲಿಂಗಾರೆಡ್ಡಿ ಸಭೆ ಕರೆದಿದ್ದಾರೆ, ಮುಂದೇನು ಮಾಡಬೇಕು ಅಂತ ಚರ್ಚಿಸ್ತಾರೆ. ಈ ಸಂಬಂಧ ಸಹಜವಾಗಿ ರೈತರು ಪ್ರತಿಭಟನೆ ಮಾಡ್ತಾರೆ, ನಿನ್ನೆಯಿಂದ ಹೋರಾಟ ಮಾಡ್ತಿದ್ದಾರೆ. ಸರ್ಕಾರ ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: CWRC ತೀರ್ಮಾನ ಸಮಾಧಾನ ತಂದಿಲ್ಲ – ಮೇಲ್ಮನವಿ ಸಲ್ಲಿಸುತ್ತೇವೆ: ರಾಮಲಿಂಗಾರೆಡ್ಡಿ
ಮೇಕೆದಾಟು ವಿಚಾರವಾಗಿ ಮಾತನಾಡಿ, ಮೇಕೆದಾಟು ಯೋಜನೆಗೆ ಆಕ್ಷೇಪ ಮಾಡುವಂತಿಲ್ಲ ಅಂತ ಸಂಸತ್ ಹೇಳಿದೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆ ಅದೇ ಅಂತಿಮ. ಕೋರ್ಟ್ ಈಗಾಗಲೇ ಹೇಳಿದೆ, ಹೀಗಾಗಿ ಅದರಂತೆ ನಡೆಯಬೇಕು. ಜೋಸೆಫ್ ವಿಜಯ್ ಪಿಎಂಗೆ ಪತ್ರ ಬರೆದಿದ್ದಾರೆ, ಬರೆಯಲಿ. ಆದ್ರೆ ಕೋರ್ಟ್ ಏನು ಹೇಳಿದೆಯೋ ಅದೇ ಅಂತಿಮ ಎಂದಿದ್ದಾರೆ.
ಸಿಎಂ ವಿಜಯ್-ಡಿಕೆಶಿ ಭೇಟಿಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ. ಎರಡೂ ರಾಜ್ಯಗಳ ಸಿಎಂ ಒಂದಷ್ಟು ವಿಚಾರದ ಬಗ್ಗೆ ಚರ್ಚೆ ಮಾಡ್ತಾರೆ. ಟಿಬಿ ಡ್ಯಾಮ್ ಕ್ರಸ್ಟ್ ಗೇಟ್ ಉದ್ಘಾಟನೆಗೆ ಮೂರು ರಾಜ್ಯಗಳ ಸಿಎಂಗಳು ಬಂದಿದ್ರು. ನಾವು ಅಕ್ಕಪಕ್ಕದ ರಾಜ್ಯಗಳು ಏನು ಜಗಳ ಆಡ್ಕೋಬೇಕಾ? ಯಾರೂ ಹೊಂದಾಣಿಕೆಯಲ್ಲಿ ಹೋಗಬಾರದಾ? ರಾಜ್ಯಗಳು ಜಗಳ ಆಡ್ಕೋಬೇಕು ಅನ್ನೋದು ಬಿಜೆಪಿ ನೀತಿ ಇರಬೇಕು, ಅದಕ್ಕೆ ಹಾಗೆ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು – ಜು.31ಕ್ಕೆ ಮಂಡ್ಯದಲ್ಲಿ ಬೃಹತ್ ಹೋರಾಟಕ್ಕೆ ಕರೆಕೊಟ್ಟ ವಿಜಯೇಂದ್ರ
