ಮೈಸೂರು: ಆರು ವರ್ಷಗಳ ಹಿಂದೆ ಮಳೆ ಬಂದು ಊರೆಲ್ಲಾ ಜಲಾವೃತವಾಗಿ, ಊರಿನ ದೇವಾಲಯವು ಬಿದ್ದು ಹೋಗಿತ್ತು. ಆದರೆ ಗರ್ಭಗುಡಿಯಲ್ಲಿದ್ದ ಗಣೇಶ ವಿಗ್ರಹಕ್ಕೆ ಮಾತ್ರ ಏನೂ ಆಗಿರಲಿಲ್ಲ. ಇಂತಹ ಅಚ್ಚರಿ ನಡೆದಿದ್ದ ದೇವಸ್ಥಾನದಲ್ಲಿ ಈಗ ಮತ್ತೊಂದು ಅಚ್ಚರಿ ನಡೆದಿದೆ. ಗಣೇಶ ದೇವಾಲಯದ ಹಿಂಬದಿಯ ಮರದಲ್ಲಿ ಗಣೇಶ ಮೂರ್ತಿ ಉದ್ಭವವಾಗಿದೆ.
ನಗರದ ಕನಕಗಿರಿ ಬಡಾವಣೆಯಲ್ಲಿ ಒಂದು ಗಣಪತಿ ದೇವಾಲಯ ಇದೆ. ಅಲ್ಲಿ ಅರಳಿ ಮರದಲ್ಲಿ ಗಣೇಶನ ಮೂರ್ತಿ ಉದ್ಭವವಾಗಿದೆ. ಉದ್ಭವ ಮೂರ್ತಿಯನ್ನು ನೋಡಲು ಸಾಲು ಸಾಲು ಭಕ್ತರು ಬರುತ್ತಿದ್ದು, ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ಸಂಕಷ್ಟ ಚರ್ತುರ್ಥಿಯಂದು ಅರ್ಚಕರ ಕಣ್ಣಿಗೆ ಬಿದ್ದಿರುವ ಈ ಗಣಪನಲ್ಲಿ ಅದೇನೋ ವಿಶೇಷ ಶಕ್ತಿ ಇದೆ ಅನ್ನೋದು ಸ್ಥಳೀಯರ ಮಾತಾಗಿದೆ.
ಅರಳಿಮರದ ಕೆಳಭಾಗದಲ್ಲಿ ಮೂಡಿರುವ ಮರದ ಬೇರುಗಳು ಸಂಪೂರ್ಣ ಗಣೇಶ ಮೂರ್ತಿಯ ಆಕಾರ ಹೊಂದಿದೆ. ಸೊಂಡಿಲು, ಕಣ್ಣು, ಕಿವಿ ಹೊಂದಿರುವ ಈ ಬೇರು ಗಣೇಶ ಮೂರ್ತಿಯಾಗಿ ಮೂಡಿದೆ. ಉದ್ಭವಮೂರ್ತಿ ಗಣಪನಿಗೆ ಅರಿಶಿನ ಕುಂಕುಮವನ್ನು ಜನರು ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮೈತ್ರಿ ಹೇಳುತ್ತಾರೆ.
ಈ ದೇವಾಲಯದ ಹಿನ್ನೆಲೆಯೂ ಈ ಮೂರ್ತಿಯ ಉದ್ಭವಕ್ಕೆ ಕಾರಣವಾ ಅನ್ನೋ ಮಾತು ಕೇಳಿ ಬಂದಿದೆ. 6 ವರ್ಷಗಳ ಹಿಂದೆ ಕನಕಗಿರಿಯಲ್ಲಿ ಭಾರಿ ಮಳೆಗೆ ಮನೆಗಳು ಜಲಾವೃತವಾಗಿ, ಇಲ್ಲಿದ್ದ ಗಣೇಶ ದೇವಾಲಯವು ಬಿದ್ದು ಹೋಗಿತ್ತು. ಆದರೆ ಗರ್ಭ ಗುಡಿಯಲ್ಲಿನ ಗಣೇಶ ಮೂರ್ತಿಗೆ ಏನೂ ಆಗಿರಲಿಲ್ಲ. ಈಗ ಇದೇ ದೇವಸ್ಥಾನದಲ್ಲಿ ಮತ್ತೊಂದು ಅಚ್ಚರಿ ಸೃಷ್ಟಿಯಾಗಿದೆ ಎಂದು ಸ್ಥಳೀಯ ರವಿ ಅವರು ತಿಳಿಸಿದ್ದಾರೆ.