ಮಂಡ್ಯ: ಚುನಾಣಾ ದಿನಾಂಕ ಘೊಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇಬ್ಬರ ಮೇಲೋಬ್ಬರು ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಇದೀಗ ಜೆಡಿಎಸ್ (JDS) ವಿರುದ್ಧ ಮಾಜಿ ಸಚಿವ ನರೇಂದ್ರಸ್ವಾಮಿ (Narendra Swamy) ನಾಲಿಗೆ ಹರಿಬಿಟ್ಟಿದ್ದಾರೆ.
ಮಾತನಾಡುವ ಭರದಲ್ಲಿ ಜೆಡಿಎಸ್ ಒಂದು ಪುಟ್ಕೋಸಿ ಪಕ್ಷ ಎಂದು ನರೇಂದ್ರಸ್ವಾಮಿ ಜರಿದಿದ್ದಾರೆ. ಈ ಮೂಲಕ ಚುನಾವಣಾ ಹತ್ತಿರವಾಗ್ತಿದ್ದಂತೆ ಸಾಂಪ್ರದಾಯಿಕ ಎದುರಾಳಿಗಳ ವಾಕ್ಸಮರ ಶುರುವಾಗಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಕೈ ನಾಯಕರ ಕ್ಷುಲ್ಲಕ ಹೇಳಿಕೆ ಮತ್ತೆ ಮುಳುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ
ಕಾಮಗಾರಿ ಪುರ್ಣಗೊಳ್ಳದೆ ವಸತಿ ಶಾಲಾ ಉದ್ಘಾಟನೆಗೆ ವಿರೋಧ ವ್ಯಕ್ತವಾಗಿದೆ. ಜೆಡಿಎಸ್ ಶಾಸಕ ಅನ್ನದಾನಿ (Annadani) ವಿರುದ್ದ ಮಳವಳ್ಳಿಯ ಹುಸ್ಕೂರು ವಸತಿ ಶಾಲೆ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಈ ವೇಳೆ ಶಾಲಾ ಕಟ್ಟಡ ಉದ್ಘಾಟನೆಗೆ ಅಡ್ಡಪಡಿಸದಂತೆ ಶಾಲಾ ಆಡಳಿತ ಮಂಡಳಿ, ಪೊಲೀಸರು ಸೂಚನೆ ನೀಡಿದರು. ಇದರಿಂದ ಕೆಂಡಾಮಂಡಲವಾದ ಮಾಜಿ ಸಚಿವ ನರೇಂದ್ರಸ್ವಾಮಿ, ಕಾಂಗ್ರೆಸ್ (Congress) ರಾಷ್ಟ್ರೀಯ ಪಕ್ಷ, ಇಡೀ ದೇಶದಲ್ಲಿ ಪಕ್ಷದಲ್ಲಿದೆ. ಪುಟ್ಕೋಸಿ ಪಕ್ಷವೇ ಇಷ್ಟು ಆಡಬೇಕಾದ್ರೆ, ನಾವು ಎಷ್ಟು ಆಡಬೇಕು. ಪ್ರತಿಭಟನೆ ಮಾಡಿದ್ರೆ ಬಂಧಿಸ್ತೀರಾ, ಬಂಧಿಸಿ ನೋಡೋಣಾ ಎಂದು ಅವಾಜ್ ಹಾಕಿದ್ದಾರೆ. ಮಾಜಿ ಸಚಿವನ ದರ್ಪದ ಮಾತಿಗೆ ಜೆಡಿಎಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.
ಒಟ್ಟಿನಲ್ಲಿ ಒಕ್ಕಲಿಗ ನಾಯಕನ ಪಕ್ಷಕ್ಕೆ ಅಪಮಾನ ಎಂಬ ಅಸ್ತ್ರ ಪ್ರಯೋಗಿಸಲು ಸ್ಥಳೀಯ ಜೆಡಿಎಸ್ ನಾಯಕರು ಪ್ಲಾನ್ ಮಾಡಿದ್ದಾರೆ. ಕಳೆದ ಬಾರಿಯು ಇಂತಹ ವರ್ತನೆಯಿಂದ ಸೋತಿದ್ದ ಕಾಂಗ್ರೆಸ್ ನ ನರೇಂದ್ರಸ್ವಾಮಿ, ಇದೀಗ ಮತ್ತೆ ಶುಕ್ರವಾರ ರೋಷಾವೇಷದಲ್ಲಿ ಆಡಿದ್ದ ಮಾತು ಇದೀಗ ವೈರಲ್ ಆಗಿದೆ.