– ಬಿಹಾರದಲ್ಲಿ ಆರೋಪಿಗಳ ಕಾರು ಬೆನ್ನಟ್ಟಿ ಹಿಡಿದ ಬೀದರ್ ಪೊಲೀಸರು
ಬೀದರ್: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಬೀದರ್ ATM ದರೋಡೆಕೋರರನ್ನ (Bidar ATM Robbery) ಬಂಧಿಸುವಲ್ಲಿ ಬೀದರ್ ಪೊಲೀಸರು ಕೊನೆಗೂ ಯಶಸ್ವಿಯಾದ್ದಾರೆ.
ಬಿಹಾರದಲ್ಲಿ (Bihar) ಆರೋಪಿಗಳ ಕಾರು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಅಮನ್ಕುಮಾರ್ ಸಿಂಗ್ & ಅಲೋಕ್ಕುಮಾರ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ವೈಶಾಲಿ ಜಿಲ್ಲೆಯ ಧಾಮೋದರ್ ಎಂಬ ಗ್ರಾಮದಲ್ಲಿ ಇಬ್ಬರು ಆರೋಪಿಗಳ ಬಂಧನ ಮಾಡಿದ್ದು, 1 ವರ್ಷ 7 ತಿಂಗಳ ಬಳಿಕ ದರೋಡೆಕೋರರ ಬಂಧನವಾಗಿದೆ. ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೀದರ್ ಎಟಿಎಂ ದರೋಡೆ ಕೇಸ್ಗೆ 1 ವರ್ಷ – ಇನ್ನೂ ಸಿಕ್ಕಿಲ್ಲ ಆರೋಪಿಗಳು
ಕಳೆದ ಇಪ್ಪತ್ತು ದಿನಗಳ ಹಿಂದೆ ಆರೋಪಿಗಳ ಸುಳಿವು ಬೀದರ್ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ, ಇಪ್ಪತ್ತು ದಿನಗಳಿಂದ ನಿರಂತರವಾಗಿ ಆರೋಪಿಗಳನ್ನ ಬೀದರ್ ಪೊಲೀಸರು ವಾಚ್ ಮಾಡಿದ್ದಾರೆ. ಬೀದರ್ ಎಸ್ಪಿ ಪ್ರದೀಪ್ ಗುಂಟಿ ನೇತೃತ್ವದ ತಂಡದಿಂದ ಆಪರೇಷನ್ ಮಾಡಿ ಇಂದು ಮಧ್ಯಾಹ್ನ ಇಬ್ಬರು ದರೋಡೆಕೋರರನ್ನು ಬಂಧಿಸಿ ಬೀದರ್ಗೆ ಕರೆತರುತ್ತಿದ್ದಾರೆ.
ಯಾವುದೇ ರಾಜ್ಯದ ಪೊಲೀಸರ ಸಹಕಾರವಿಲ್ಲದೇ ದರೋಡೆಕೋರರನ್ನು ಬೀದರ್ ಪೊಲೀಸರು ಬಂಧಿಸಿದ್ದು, ಎಸ್ಪಿ 1, ಡಿಎಸ್ಪಿ 2, ಸಿಪಿಐ 2, ಪಿಎಸ್ಐ 4, ಕ್ರೈಂ ಸ್ಟಾಪ್ 12 ಸೇರಿ 20ಕ್ಕೂ ಅಧಿಕ ಸಿಬ್ಬಂದಿಯಿಂದ ದರೋಡೆಕೋರರ ಬಂಧನವಾಗಿದೆ. ಇದನ್ನೂ ಓದಿ: ಬೀದರ್ನಲ್ಲಿ ಎಟಿಎಂ ಹಣ ದರೋಡೆ ಕೇಸ್ – ಖದೀಮರ ಸುಳಿವು ಪತ್ತೆ
ಪ್ರಕರಣ ಏನು?
ಬೀದರ್ ನಗರದ ಹೃದಯ ಭಾಗದಲ್ಲಿ 2025 ಜನವರಿ 16 ರಂದು ಹಾಡಹಗಲೇ ಬೈಕ್ನಲ್ಲಿ ಬಂದು ದರೋಡೆಕೋರರು ದರೋಡೆ ಮಾಡಿದ್ದರು. ಈ ವೇಳೆ ಎಂಎಸ್ ಏಜೆನ್ಸಿ ಸಿಬ್ಬಂದಿಯೋರ್ವನನ್ನು ಕೊಂದು ಇಬ್ಬರು ಖದೀಮರು 83 ಲಕ್ಷ ರೂ. ದರೋಡೆ ಮಾಡಿದ್ದರು. ದರೋಡೆಕೋರರ ಶೂಟೌಟ್ಗೆ ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಶಿವಕುಮಾರ್ ಗುನ್ನಳ್ಳಿ ಗಂಭೀರವಾಗಿ ಗಾಯಗೊಂಡಿದ್ದರು. ದರೋಡೆಕೋರರ ಬಂಧನ ಹಿನ್ನೆಲೆ ಘಟನೆ ನಡೆದಿದ್ದ ಸ್ಥಳವಾದ ಎಸ್ಬಿಐ ಬ್ಯಾಂಕ್ ಮುಂದೆ ಪೊಲೀಸರು ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ.

