ಮೈಸೂರು: ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ದಸರಾ ಗಜಪಡೆಗೂ ಅಮಾವಾಸ್ಯೆ ಬಿಸಿ ಮುಟ್ಟಿದ್ದು, ಗಜಪಡೆ ತಾಲೀಮಿಗೆ ಬ್ರೇಕ್ ಬಿದ್ದಿದೆ.
ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಪ್ರತಿದಿನ ಅರಮನೆಯಿಂದ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್ನಗರ ಬಂಬೂಬಜಾರ್, ಹೈವೆ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿದ್ದವು. ಬಳಿಕ ಅದೇ ಮಾರ್ಗವಾಗಿ ಆನೆಗಳು ಮೈಸೂರು ಅರಮನೆಗೆ ವಾಪಸ್ಸಾಗುತ್ತಿದ್ದವು. ಆದರೆ ಇಂದು ಅಮಾವಾಸ್ಯೆಯಾಗಿದ್ದರಿಂದ ತಾಲೀಮು ನಡೆಯುತ್ತಿಲ್ಲ. ಪ್ರತಿ ಅಮಾವಾಸ್ಯೆ ಬಂದರೂ ಆನೆಗಳಿಗೆ ತಾಲೀಮು ನಡೆಸುವುದಿಲ್ಲ. ಇದನ್ನೂ ಓದಿ: ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ
ಮೈಸೂರಿನ ಒಳಗೆ 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತದೆ. ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆಯೂ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗುತ್ತದೆ.
ತಾಲೀಮು ಏಕೆ?
ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv