ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರನ್ನ ಎಳೆದು ತರುವುದು ಸೂಕ್ತವಲ್ಲ ಅಂತ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ದೇವೇಗೌಡರ ಭೇಟಿ ಬಳಿಕ ಪ್ರಜ್ವಲ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಉತ್ತರ ಕೊಡಬೇಕು ಎಂಬ ಕಾಂಗ್ರೆಸ್ (Congress) ನಾಯಕರ ಮಾತಿಗೆ ಉತ್ತರ ನೀಡಿದ ಅವರು, ಈ ಪ್ರಕರಣದಲ್ಲಿ ದೇಶದ ಪ್ರಧಾನಿಗಳನ್ನ ಎಳೆದು ತರೋದು ಸರಿಯಲ್ಲ, ಸೂಕ್ತವಲ್ಲ. ಮೋದಿ (Narendra Modi) ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದರು.
ರೇವಣ್ಣ ವಿಚಾರ ಆಗಲಿ, ಹಾಸನ ಸಂಸದರ ವಿಚಾರ ಆಗಲಿ ನಾನು ಅನೇಕ ಸಮಯದಲ್ಲಿ ನಾನು ಮಾಧ್ಯಮಗಳಲ್ಲಿ ಹೇಳಿದ್ದೇನೆ. ನನ್ನ ರಾಜಕೀಯ ಬದುಕು, ನನ್ನ ಪಕ್ಷ, ನಾನು ಪಕ್ಷದ ಕಾರ್ಯಕರ್ತನಾಗಿ ನಾನು ಹೆಚ್ಚು ಹಾಸನ ಜಿಲ್ಲೆಗೆ ಕಾಲಿಟ್ಟವನು ಅಲ್ಲ. ಹಾಸನಾಂಬೆ ದರ್ಶನಕ್ಕೆ ಮಾತ್ರ ಹೋಗಿರೋದು ಮಾತ್ರ ಪ್ರತಿವರ್ಷ. ಅದು ಬಿಟ್ಟರೆ ನಾನು ಯಾವತ್ತೂ ಹೋಗಿಲ್ಲ. ನನಗೂ ಮತ್ತು ಹಾಸನ ಸಂಸದರಿಗೂ ಹೆಚ್ಚಿನ ಸಂಪರ್ಕ ಇಲ್ಲ ನಾನು ಸಲಹೆ ಕೊಡುವ ಅಷ್ಟು ಇಲ್ಲ. ಇದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ ಎಂದರು. ಇದನ್ನೂ ಓದಿ: ಎಳನೀರು ಸೇವಿಸಿ ದಲಿತರೊಂದಿಗೆ ನಾವಿದ್ದೇವೆ ಅಂದ್ರು ಯದುವೀರ್
ಪ್ರಜ್ವಲ್ಗೆ ಟಿಕೆಟ್ ಕೊಡಬೇಡಿ ಅಂತ ಮೊದಲೇ ಬಿಜೆಪಿ ಅವರು ಹೇಳಿದ್ರು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷದ ಕಾರ್ಯಕರ್ತ. ಅದು ಅಧ್ಯಕ್ಷರು ತೀರ್ಮಾನ ಮಾಡ್ತಾರೆ. ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು, ಕೋರ್ ಕಮಿಟಿ ಅಧ್ಯಕ್ಷರ ನಿರ್ಧಾರಕ್ಕೆ ತಲೆ ಬಾಗಿ ನಾವು ಕಾರ್ಯಕರ್ತರಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ ಅಷ್ಟೇ ಎಂದರು. ಹಾನಸ ಕಾರ್ಯಕರ್ತರಿಗೆ ಧೈರ್ಯ ತುಂಬಲು ಸ್ವಲ್ಪ ದಿನಗಳಲ್ಲಿ ಕುಮಾರಸ್ವಾಮಿ ಹಾಸನಕ್ಕೆ ಹೋಗ್ತಾರೆ. ಪಕ್ಷದ ಕಾರ್ಯಕರ್ತರು, ನಾಯಕರು, ಮುಖಂಡರಿಗೆ ಜೊತೆ ಕುಮಾರಸ್ವಾಮಿ ಸಮಾಲೋಚನೆ ಮಾಡ್ತಾರೆ. ಯಾರು ಧೃತಿಗೆಡಲು ಪಕ್ಷ ಅವಕಾಶ ಮಾಡಿಕೊಡಲ್ಲ ಎಂದು ಹೇಳಿದರು.
ರೇವಣ್ಣ ಬಗ್ಗೆ ಮಾಜಿ ಸಂಸದ ಶಿವರಾಮೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಶಿವರಾಮೇಗೌಡರು ಹಿರಿಯರು. ಏನೋ ಮಾತಾಡಿರುತ್ತಾರೆ. SIT ರಚನೆ ಆಗಿದೆ. ವರದಿ ಬಂದ ಮೇಲೆ ಚರ್ಚೆ ಮಾಡೋಣ ಎಂದರು.