ನವದೆಹಲಿ: ಇಬ್ಬರು ಅಪರಿಚಿತ ವ್ಯಕ್ತಿಗಳು ಆರು ವರ್ಷದ ಮಗನ ಎದುರೇ ತಂದೆಯನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಓಖ್ಲಾ ಸಬ್ಜಿ ಮಂಡಿಯ ಹೊರಗೆ ನಡೆದಿದೆ.
ಗುಂಡಿನ ದಾಳಿಗೆ ಬಲಿಯಾದ ತಂದೆಯನ್ನು ಓಖ್ಲಾ ನಗರದ ನಿವಾಸಿಯಾದ ತರಕಾರಿ ವ್ಯಾಪಾರಿ ಮೊಹಮ್ಮದ್ ಫಝ್ಲೂ ಎಂದು ಗುತಿಸಲಾಗಿದೆ. ಈ ಘಟನೆಯಲ್ಲಿ ಜೊತೆಗೆ ಇದ್ದ 6 ವರ್ಷದ ಮಗನಿಗೂ ಗಂಭೀರವಾಗಿ ಗಾಯಗಳಾಗಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಫಝ್ಲೂ ತನ್ನ ಮಗ ಮತ್ತು ಪತ್ನಿಯ ಜೊತೆ ಓಖ್ಲಾ ನಗರದಲ್ಲಿ ನೆಲೆಸಿದ್ದ ಮತ್ತು ಸಬ್ಜಿ ಮಂಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದನು. ಪಝ್ಲೂ ಶನಿವಾರ ಸ್ನೇಹಿತ ಮತ್ತು ಮಗನ ಜೊತೆ ಬೈಕಿನಲ್ಲಿ ತನ್ನ ತಂಗಿಯ ಮನೆಗೆ ಹೋಗಿದ್ದಾನೆ. ವಾಪಸ್ ಬರುವಾಗ ಸ್ನೇಹಿತ ಮಂಡಿಯ ಬಳಿ ಇಳಿದುಕೊಂಡಿದ್ದಾನೆ. ಸ್ನೇಹಿತನನ್ನು ಇಳಿಸಿ ಮನೆಗೆ ಹೋರಟ ಅವನ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿ ಪಾರಾರಿಯಾಗಿದ್ದಾರೆ.
ಅಪರಿಚಿತರ ಗುಂಡಿನ ದಾಳಿಯಿಂದ ಬೈಕ್ ಓಡಿಸುತ್ತಿದ್ದ ಫಝ್ಲೂ ತಲೆಗೆ ಮತ್ತು ಕುತ್ತಿಗೆ ಜಾಗಕ್ಕೆ ಗುಂಡು ತಗಲಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಈ ಘಟನೆಯಲ್ಲಿ ಅಪ್ಪನ ಜೊತೆ ಬೈಕಿನಲ್ಲಿ ಇದ್ದ ಅವರ ಆರು ವರ್ಷದ ಮಗನು ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಉಪ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್ ಅವರು, ಕೊಲೆಗಾರರ ಪತ್ತೆಹಚ್ಚಲು ಹತ್ತಿರದಲ್ಲಿ ಇದ್ದ ಸಿಸಿಟಿವಿಯನ್ನು ಚೆಕ್ ಮಾಡಲಾಗುತ್ತಿದೆ. ಈ ಘಟನೆಯನ್ನು ನೋಡಿದರೆ ಇದು ಹಣ ದೋಚಲು ಮಾಡಿರುವ ಕೊಲೆ ಅಲ್ಲ. ಇದು ವೈಯಕ್ತಿಕ ದ್ವೇಷದಿಂದ ಮಾಡಿರುವ ಕೊಲೆ ಎಂದು ಪ್ರಾಥಮಿಕ ತನಿಖೆಯ ವೇಳೆ ಕಂಡು ಬಂದಿದೆ ಎಂದು ಹೇಳಿದ್ದಾರೆ.