ಧಾರವಾಡ: ಹೊಟ್ಟೆ ಹಸಿವಿನಿಂದಾಗಿ ನಾಗರಹಾವೊಂದು ನಾಯಿ ಮರಿಯನ್ನು ನುಂಗಲು ಯತ್ನಿಸಿರುವ ಘಟನೆ ಜಿಲ್ಲೆಯ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ.
ನಗರದ ಶೇಖರ ಬಿಜಲಿ ಎಂಬುವರ ಮನೆ ಬಳಿ ನಾಗರಹಾವು ನಾಯಿ ಮರಿಯನ್ನ ನುಂಗಲು ಯತ್ನ ನಡೆಸಿದೆ. ಮರದ ಸೌದೆ ಕೆಳಗೆ ನಾಯಿ ಮರಿಗಳ ಗುಂಪು ವಾಸವಿತ್ತು. ಅಲ್ಲೇ ಪಕ್ಕದಲ್ಲಿದ್ದ ನಾಗರಹಾವೊಂದು ಅವುಗಳ ಬಳಿ ಹೋಗಿ ಹಸಿವಿನಿಂದ ನಾಯಿ ಮರಿಯನ್ನು ತಿನ್ನಲು ಯತ್ನಿಸಿದ್ದು, ಒಂದು ನಾಯಿಮರಿಯನ್ನು ಹಿಡಿದುಕೊಂಡಿದೆ. ಇದನ್ನ ನೋಡಿದ ಶೇಖರ ಎಂಬವರು ತಕ್ಷಣ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಎಲ್ಲಪ್ಪ ಬರುವಷ್ಟರಲ್ಲಿ ನಾಗರಹಾವು ನಾಯಿಮರಿಯನ್ನ ಅರ್ಧದಷ್ಟು ನುಂಗಿತ್ತು. ಎರಡು ದಿನಗಳ ಹಿಂದೆಯಷ್ಟೆ ನಾಯಿ 4 ಮರಿಗಳನ್ನ ಹಾಕಿತ್ತು. ಸ್ಥಳಕ್ಕೆ ಬಂದ ಎಲ್ಲಪ್ಪ ನಾಯಿ ಮರಿ ನುಂಗಿದ್ದ ನಾಗರ ಹಾವನ್ನ ಹಿಡಿದು, ಆ ನಾರಿಮರಿಯನ್ನ ನಾಗರ ಹಾವಿನ ಬಾಯಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾಯಿ ಮರಿ ಅಷ್ಟೊತ್ತಿಗೆ ಸಾವನ್ನಪ್ಪಿದೆ.
ಉರಗತಜ್ಞ ಎಲ್ಲಪ್ಪ ರಕ್ಷಣೆ ಮಾಡಿದ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದಾರೆ.