ಬೆಂಗಳೂರು: ಅಸೆಂಬ್ಲಿ ಚುನಾವಣೆ ಸನಿಹದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ನಾಯಕರು ಗಂಭೀರ ಆರೋಪವೊಂದನ್ನು ಮಾಡಿದ್ದು, ಇದಕ್ಕೆ ಬಿಜೆಪಿ ಚಿಲುಮೆ ಸಂಸ್ಥೆಗೆ ಮೈತ್ರಿ ಸರ್ಕಾರ ಇದ್ದಾಗಲೇ ಅನುಮತಿ ಕೊಟ್ಟಿದ್ರು ಎಂದು ತಿರುಗೇಟು ನಿಡಿತ್ತು. ಆದರೆ ಈ ಬಗ್ಗೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿ, ಸಿಎಂ ಹಾಗೂ ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕಾಲದಲ್ಲಿ, ಇವರ ಕಾಲದಲ್ಲಿ ಇತ್ತು ಎಂದು ಕೇಳುತ್ತೀರಲ್ಲಾ, ಒಂದು ಸಂಸ್ಥೆ ದುಡ್ಡು ಇಲ್ಲದೆ ಕೆಲಸ ಮಾಡುತ್ತಿದೆ ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಜಾಹೀರಾತು ಕೊಡದೇ, ಆ ಸಂಸ್ಥೆ ಅವರಿಗೆ ಕೊಟ್ಟಿದ್ದಾರೆ. ಅವರು ಬಿಎಲ್ ಓಗಳ ಸೋಗಿನಲ್ಲಿ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿಲುಮೆ ಸಂಸ್ಥೆ ವಿರುದ್ಧ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ 6 ಲಕ್ಷ ಮತದಾರರ ಹೆಸರು ಡಿಲೀಟ್
ಸಿಎಂ ಹಾಗೂ ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ..?. ವ್ಯವಹಾರ ಎಷ್ಟು ನಡೆದಿರಬಹುದು..?. ಹಣ ಇಲ್ಲದೆ ಮಾಡುತ್ತಿದ್ದಾರೆ 8000, 10000 ಜನರನ್ನು ನೇಮಕ ಮಾಡಬೇಕಾದ್ರೆ ಎಷ್ಟು ಹಣ ಬೇಕು..?, ದಿನಕ್ಕೆ 1,500 ಕೊಡಬೇಕಾದರೇ ಎಷ್ಟು ಹಣ ಬೇಕು..!? ಅದಕ್ಕೆ ಹಿಂದಿನ ಕಾಲದಲ್ಲಿ ಆಗಿತ್ತು, ಅಂದ್ರೆ ಹೇಗೆ..?. ಮೊದಲು ಈ ಬಗ್ಗೆ ತನಿಖೆ ಮಾಡಲಿ, ನಾವು ಕೇಸ್ ದಾಖಲು ಮಾಡಿದ್ದೇವೆ. ನ್ಯಾಯಾಧೀಶರ ನೇತೃತ್ವದಲ್ಲಿ ಅವರಿಂದ ತನಿಖೆ ಆಗಬೇಕು ಎಂದರು. ಇದೇ ವೇಳೆ ಕಾಂಗ್ರೆಸ್ ಆರೋಪ ಹಾಸ್ಯಾಸ್ಪದ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ತನಿಖೆ ಮಾಡ್ಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕಾಂಗ್ರೆಸ್ ಆರೋಪ ಏನು..?: ಚುನಾವಣೆ ಗೆಲ್ಲುವ ಸಲುವಾಗಿ ಬಿಜೆಪಿ (BJP) ಅಡ್ಡದಾರಿ ಹಿಡಿದಿದ್ದು, ವೋಟರ್ ಐಡಿ ಹಗರಣ ನಡೆಸಿದೆ ಎಂದು ಕೈ ನಾಯಕರು ಅಪಾದಿಸಿದ್ದಾರೆ. ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ 18ಸಾವಿರ ನಕಲಿ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಿಸಿಕೊಂಡು ಮತದಾರರ ದತ್ತಾಂಶವನ್ನು ಕದಿಯಲಾಗುತ್ತಿದೆ ಎಂದು ದೂರಿದ್ದಾರೆ. ಈ ಮೂಲಕ ಎಸ್ಸಿ, ಎಸ್ಟಿ, ಮುಸ್ಲಿಂ ಮತದಾರರನ್ನು ಮತಪಟ್ಟಿಯಿಂದ ಕಿತ್ತು ಹಾಕುವ ಹುನ್ನಾರವನ್ನು ನಡೆಸಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು. ಇದನ್ನೂ ಓದಿ: ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು – ಬಿಜೆಪಿ ತಿರುಗೇಟು
ಆಯೋಗದ ಸೂಚನೆಯಂತೆ ರಾಜ್ಯ ಸರ್ಕಾರ ಮಾಡಿಸಬೇಕಾದ ಮತದಾರರ ಮಾಹಿತಿ ಸಂಗ್ರಹದ ಕೆಲಸವನ್ನು ಚಿಲುಮೆ ಎನ್ಜಿಓ ಕಡೆಯಿಂದ ಮಾಡಿಸಿರೋದು ಕ್ರಿಮಿನಲ್ ಅಪರಾಧ. ಇದಕ್ಕೆಲ್ಲಾ ಸಿಎಂ ಬೊಮ್ಮಾಯಿ ಹೊಣೆಗಾರರು, ಅವರನ್ನು ಕೂಡ್ಲೇ ಬಂಧಿಸಬೇಕು. ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರ ಹಿಂದೆ ಮಲ್ಲೇಶ್ವರಂ ಶಾಸಕರು, ಬಿಬಿಎಂಪಿ (BBMP) ಕಮೀಷನರ್ ಕೂಡ ಇದ್ದಾರೆ. ಅವರ ಮೇಲೂ ಎಫ್ಐಆರ್ ದಾಖಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು.
ಚಿಲುಮೆ ಎನ್ಜಿಓ ಮುಖ್ಯಸ್ಥರು ಮಲ್ಲೇಶ್ವರಂ ಶಾಸಕರ ಜೊತೆ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ಬಿಬಿಎಂಪಿ ಪೊಲೀಸ್ ಕಮೀಷನರ್ಗೆ ಕಾಂಗ್ರೆಸ್ ನಿಯೋಗ ದೂರು ನೀಡಿದೆ. ಅಂದ ಹಾಗೇ, ಈ ಚಿಲುಮೆ ಎಂಬ ಸರ್ಕಾರೇತರ ಸಂಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಿದ್ದು ಸಮ್ಮಿಶ್ರ ಸರ್ಕಾರ. 2018ರಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಹೊಣೆಯನ್ನು ಚಿಲುಮೆ ಸಂಸ್ಥೆಗೆ ನೀಡಲಾಗಿತ್ತು. ಆಗ ಬೆಂಗಳೂರು ಉಸ್ತುವಾರಿ ಆಗಿದ್ದವರು ಡಾ.ಜಿ ಪರಮೇಶ್ವರ್. ಇದೀಗ ಅದೇ ಸಂಸ್ಥೆ ವಿರುದ್ಧ ಕಾಂಗ್ರೆಸ್ ಸಿಡಿದಿತ್ತು. ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ CM ಸೇರಿ ಬಿಜೆಪಿಯ ಹಿರಿಯ ಸಚಿವರೆಲ್ಲರೂ ಭಾಗಿಯಾಗಿದ್ದಾರೆ: ಸಿದ್ದರಾಮಯ್ಯ
ಬಿಜೆಪಿ ಹೇಳಿದ್ದೇನು..?: ಕಾಂಗ್ರೆಸ್ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದ್ದು, ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡ್ತಿದೆ. ಆದರೂ ಈ ಬಗ್ಗೆ ಸಮಗ್ರ ತನಿಖೆಗೆ ಸೂಚನೆ ನೀಡ್ತೇನೆ. ಕಾಂಗ್ರೆಸ್ ನನ್ನ ರಾಜೀನಾಮೆಗೆ ಒತ್ತಾಯಿಸೋದು ಹಾಸ್ಯಾಸ್ಪದ ಎಂದು ಸಿಎಂ ಹೇಳಿದ್ದಾರೆ. ಅಶ್ವಥ್ ನಾರಾಯಣ್ (Ashwath Narayan) ಕೂಡ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಪರಿಚಯ ಇದ್ದ ಮಾತ್ರಕ್ಕೆ ನಾನೇ ಮಾಡಿಸಿರೋದು ಅಂತಾ ಅರ್ಥನಾ? ಕಾಂಗ್ರೆಸ್ನವರಿಗೆ ನನ್ನ ಕಂಡ್ರೆ ಭಯ.. ಅದಕ್ಕೆ ಟಾರ್ಗೆಟ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂಥಾ ದರ್ದು ನಮ್ ಸರ್ಕಾರಕ್ಕೆ ಬಂದಿಲ್ಲ. ಹೊಂಬಾಳೆ ಸಂಸ್ಥೆಗೂ ಇದಕ್ಕೂ ಸಂಬಧ ಇಲ್ಲ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದರು. ಅಷ್ಟಕ್ಕೂ ಜಾಗೃತಿಗಾಗಿ ಎನ್ಜಿಓಗಳನ್ನು ನೇಮಿಸೋದು ಇದೇನು ಮೊದಲಾ.. ನೀವೇ ನೇಮಿಸಿದ್ರಲ್ವೇ ಎಂದು ಆರೋಗ್ಯ ಮಂತ್ರಿಗಳು ಕೇಳಿದ್ದರು. 2018ರಲ್ಲಿ ಚಿಲುಮೆ ಸಂಸ್ಥೆಗೆ ಈ ಕೆಲಸ ಕೊಟ್ಟವರು ಯಾರಪ್ಪ ಎಂದು ಬಿಜೆಪಿಯ ಇತರೆ ನಾಯಕರು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯರನ್ನೇ ಬಂಧಿಸಬೇಕು ಎಂದು ಆಗ್ರಹಿಸಿದ್ದರು.