-ಬಿಜೆಪಿಯಿಂದ ಕಾಂಗ್ರೆಸ್ಗೆ 10 ಪ್ರಶ್ನೆ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲಿನ ಕಪ್ಪ ಕಾಣಿಕೆಯ ಡೈರಿ ಪ್ರಕರಣ ಠುಸ್ ಆಗಿದೆ. ಐಟಿ ಇಲಾಖೆ ಇದನ್ನು ಫೇಕ್ ಎಂದಿದ್ದು, ಹಸ್ತಾಕ್ಷರ ನಕಲಿ ಎಂದಿದೆ. ಇನ್ನೊಂದೆಡೆ ಬಿಜೆಪಿ ಕಾಂಗ್ರೆಸ್ ನಾಯಕರಿಗೆ ಕೇಸ್ ಸಂಬಂಧ 10 ಪ್ರಶ್ನೆಗಳನ್ನು ಕೇಳಿದೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಎಸ್ವೈ ಕಪ್ಪ ಕಾಣಿಕೆಯ ಡೈರಿ ಕೇಸ್ ಸ್ಫೋಟವಾದ ವೇಗದಲ್ಲೇ ಠುಸ್ಸಾಗಿದೆ. ಡೈರಿ ಪ್ರಕರಣವನ್ನ ಕಾಂಗ್ರೆಸ್ ಹೊರಬಿಡುತ್ತಲೇ ಎಚ್ಚೆತ್ತ ಬಿಜೆಪಿ ಇದನ್ನ ನಕಲಿ ಎಂದು ಹೇಳಿತ್ತು. ಉದ್ದೇಶಪೂರ್ವಕವಾಗಿ ಇದನ್ನ ಬಿಡುಗಡೆ ಮಾಡಲಾಗಿದೆ ಎಂದು ಹರಿಹಾಯ್ದಿತ್ತು. ಇದಕ್ಕೆ ಪೂಕರವೆಂಬಂತೆ ಆದಾಯ ತೆರಿಗೆ ಇಲಾಖೆ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ. ಡಿಕೆಶಿ ಮನೆಯಲ್ಲಿ ಸಿಕ್ಕಿ ಡೈರಿ ನಕಲಿ, ಸಹಿ ಕುರಿತು ನಾವು ಆಗಲೇ ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗಿದೆ ಎಂದು ಐಟಿ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್ವೈ ಡೈರಿ ಇಟ್ಕೊಂಡು ಡಿಕೆಶಿ ಚೌಕಾಶಿ – ಸತ್ಯ ಬಿಚ್ಚಿಟ್ಟ ಐಟಿ ಇಲಾಖೆ
ಕಾಂಗ್ರೆಸ್ `ಡೈರಿ ರಾಜಕೀಯಕ್ಕೆ’ ಬಿಜೆಪಿ ಪ್ರಶ್ನೆಗಳೇನು?
* ಪ್ರಶ್ನೆ 1: ಡೈರಿ ನಿಮಗೆ ಸಿಕ್ಕಿದ್ದು ಯಾವಾಗ..?
* ಪ್ರಶ್ನೆ 2: ಯಾರು ಈ ಡೈರಿಯನ್ನು ತಂದುಕೊಟ್ಟರು..?
* ಪ್ರಶ್ನೆ 3: ಡೈರಿಯನ್ನು ಎಲ್ಲಿ ಕೊಟ್ಟರು..?
* ಪ್ರಶ್ನೆ 4: ಒರಿಜಿನಲ್ ಡೈರಿ ಎಲ್ಲಿ..?
* ಪ್ರಶ್ನೆ 5: ಏಕೆ ಇದುವರೆಗೂ ಈ ಡೈರಿ ಆಧರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ..?
* ಪ್ರಶ್ನೆ 6: 2013 ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು..?
* ಪ್ರಶ್ನೆ 7: ಡೈರಿಯು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
* ಪ್ರಶ್ನೆ 8: ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಈಗ ಏಕೆ ದೂರು ನೀಡದಿರಲು ಕಾರಣವೇನು?
* ಪ್ರಶ್ನೆ 9: ಎಂಎಲ್ಸಿ ಗೋವಿಂದರಾಜು ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿತ್ತು ಎಂದು ನಮೂದಾಗಿತ್ತು. ಆಗ ಯಡಿಯೂರಪ್ಪ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ..?
* ಪ್ರಶ್ನೆ 10: ಡೈರಿ ಪ್ರಕರಣ ಜನಲೋಕಪಾಲ್ ತನಿಖೆಗೆ ಸೂಕ್ತವಾದುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಆರೋಪ ಮಾಡಿದವರು ದೂರು ನೀಡಬೇಕೆ ಅಥವಾ ದೂರಿಗೆ ಒಳಗಾದವರೇ..? ಇದನ್ನೂ ಓದಿ: ಕಾಂಗ್ರೆಸ್ ಬಿಚ್ಚಿಟ್ಟ ಡೈರಿಯ ಸತ್ಯಾಂಶವನ್ನು ಅಲ್ಲಗಳೆದ ಐಟಿ ಇಲಾಖೆ
ಡೈರಿ ಕೇಸ್ ನಕಲಿ ಎಂದು ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಸಿದ ಬಿಎಸ್ವೈ, ಇದು ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಎಂದಿದ್ದಾರೆ. ಅಲ್ಲದೆ ಬಿಎಸ್ವೈ ಪುತ್ರ ರಾಘವೇಂದ್ರ `ಇದು ಜೋಕ್ ಆಫ್ ದಿ ಇಯರ್’ ಅಂದಿದ್ದರು. ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಡೈರಿಯಲ್ಲಿರೋದು ಯಡಿಯೂರಪ್ಪ ಸಹಿಯೇ. ಇದ್ರಲ್ಲಿ ಯಾವುದೇ ಅನುಮಾನ ಬೇಡ. ಬೇಕಿದ್ರೆ ಈ ಬಗ್ಗೆ ಲೋಕಪಾಲ ತನಿಖೆ ಆಗಲಿ ಎಂದು ಹೇಳಿದ್ರು.
ಒಟ್ಟಿನಲ್ಲಿ ಬಿಎಸ್ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎನ್ನಲಾದ ಡೈರಿ ಕೇಸ್ ಸದ್ಯಕ್ಕೆ ತಣ್ಣಗಾದಂತೆ ಕಂಡುಬರುತ್ತಿದ್ದು, ಮುಂದಿನ ಪ್ರತಿಕ್ರಿಯೆಗಳನ್ನು ಕಾದು ನೋಡಬೇಕಿದೆ.