ಬಾಗಲಕೋಟೆ: ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಸೋಮವಾರ ತಡರಾತ್ರಿ ಪಕ್ಷದ ನಗರ ಘಟಕದ ಅಧ್ಯಕ್ಷ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಜಮಖಂಡಿ ನಗರದ ಕಲೂತಿ ಪೆಟ್ರೋಲ್ ಬಂಕ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಉಮೇಶ್ ಅಲಮೇಲಕರ್ ಮೇಲೆ ಹಲ್ಲೆ ನಡೆದಿದೆ. ಜಮಖಂಡಿ ಬಿಜೆಪಿಯ ನಗರ ಘಟಕದ ಅಧ್ಯಕ್ಷ ಶ್ರೀಧರ ಕೊಣ್ಣೂರ ಹಾಗೂ ಅವರ ಸಹಚರರು ಸೇರಿ ಕಬ್ಬಿಣದ ರಾಡ್ ಹಾಗೂ ಸೋಡಾ ಬಾಟಲ್ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಈ ಹಲ್ಲೆಯಿಂದ ಉಮೇಶ್ ಅವರ ತಲೆ ಹಾಗೂ ಎಡಗಣ್ಣಿಗೆ ಗಾಯವಾಗಿದ್ದು, ಗಾಯಾಳುವನ್ನು ಜಮಖಂಡಿ ಕೆ.ಎಲ್.ಇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮಖಂಡಿ ಉಪಚುನಾವಣೆ ವೇಳೆ ಇವರಿಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಸೋಮವಾರ ಈ ಬಗ್ಗೆ ಶುರುವಾದ ಜಗಳ ನಂತರ ಹಲ್ಲೆಗೆ ತಿರುಗಿತ್ತು.
ಸದ್ಯ ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಉಮೇಶ್ ಅಲಮೇಲಕರ್ ಅವರು ಶ್ರೀಧರ ಕೊಣ್ಣೂರ ಅವರ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.