ಬಿಗ್ ಬಾಸ್ (Bigg Boss) ಮನೆಯಲ್ಲಿ ಸಂಖ್ಯಾಶಾಸ್ತ್ರದ ಮೂಲಕ ಸದ್ದು ಮಾಡ್ತಿದ್ದ ಆರ್ಯವರ್ಧನ್ ಗುರೂಜಿ (Aryavardhan Guruji) ಇತ್ತೀಚೆಗೆ ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಮಾಡಿರುವ ನಿಯಮವನ್ನೇ ಮೀರಿ, ಗುರೂಜಿ ತಪ್ಪು ಮಾಡಿದ್ದಾರೆ. ಗುರೂಜಿ ಮಾಡಿದ ಎಡವಟ್ಟಿಗೆ ಮನೆಮಂದಿ ಶಿಕ್ಷೆ ಅನುಭವಿಸುವಂತೆ ಆಗಿದೆ.
ದೊಡ್ಮನೆಯಲ್ಲಿ ಗುರೂಜಿ ಅವರು ಯಾವಾಗಲೂ ತಮ್ಮ ನಿಲುವೇ ಸರಿ ಎನ್ನುತ್ತಾ ಬಂದವರು. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಕೆಲವೊಮ್ಮೆ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗ ಆರ್ಯವರ್ಧನ್ ಅವರು ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಇದರಿಂದ ಮನೆ ಮಂದಿಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ.
ಬಿಗ್ ಬಾಸ್ನಲ್ಲಿ (Bigg Boss) ಈ ವಾರ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಅನುಸಾರ ನೀರಿನಲ್ಲಿ ಮರದ ಪಂಜರ ಒಂದನ್ನು ಇಡಲಾಗಿತ್ತು. ಇದಕ್ಕೆ 12 ನಟ್ಗಳನ್ನು ಜೋಡಿಸಲಾಗಿತ್ತು. ಇದನ್ನು ಆಟ ಆಡುವ ಸ್ಪರ್ಧಿಗಳು ಬರಿಗೈನಲ್ಲಿ ಬಿಚ್ಚಬೇಕಿತ್ತು. ಈ ಆದೇಶ ಬಂದ ಹೊರತಾಗಿಯೂ ಆರ್ಯವರ್ಧನ್ ಬಟ್ಟೆ ಸಹಾಯದಿಂದ ನಟ್ ಬಿಚ್ಚಿದ್ದರು.
ಬಿಗ್ ಬಾಸ್ ನೀಡಿದ ಆದೇಶದಲ್ಲಿ ಬಟ್ಟೆಯನ್ನು ಬಳಕೆ ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗಿತ್ತು. ಆದರೂ ಆಟದ ವೇಳೆ ಗುರೂಜಿ ಬಟ್ಟೆ ಬಳಸಿದ್ದರು. ಅನುಪಮಾ ಮತ್ತು ಮನೆಮಂದಿ ಎಷ್ಟೇ ಎಚ್ಚರಿಕೆ ನೀಡಿದ್ದರೂ ಕ್ಯಾರೆ ಎನ್ನದೇ ತಾವು ಮಾಡಿದ್ದೇ ಸರಿ ಎಂಬ ನಿಲುವು ತೋರಿಸಿದ್ದಾರೆ. ಇದರ ಪರಣಾಮ ಮನೆಗೆ ಸಿಗಬೇಕಾದ ಯಾವುದೇ ಸೌಕರ್ಯಗಳು ಸಿಗದೇ ಪೇಚಾಡುವ ಪರಿಸ್ಥಿತಿ ಮನೆ ಮಂದಿಗೆ ಒದಗಿ ಬಂದಿದೆ. ಗುರೂಜಿ ಮಾಡಿದ ತಪ್ಪಿಗೆ ಮನೆಗೆ ಸಿಗುವ ಸೌಕರ್ಯ ಕೂಡ ಬಿಗ್ ಬಾಸ್ ರದ್ದು ಮಾಡಿದ್ದಾರೆ.