– ಎಸ್ಸಿ ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ಪಡೆಯಲು ಸಲಹೆ
ಬೆಂಗಳೂರು: ತಮ್ಮ ಕ್ಲೇಮ್ ಹಾಗೂ ವಿವಿಧ ಕೋರ್ಸ್ಗಳ ರ್ಯಾಂಕ್ ಮಾಹಿತಿ ಒಳಗೊಂಡಿರುವ ಪರಿಶೀಲನಾ ಚೀಟಿ (Verification Slip) ಡೌನ್ಲೋಡ್ ಆಗದವರು ಜೂನ್ 19ರೊಳಗೆ ಸಮಯ ನಿಗದಿ ಮಾಡಿಕೊಂಡು ಕೆಇಎ (KEA) ಕಚೇರಿಗೆ ಖುದ್ದು ಭೇಟಿ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸುವ ಮುನ್ನ ಪರಿಶೀಲನಾ ಚೀಟಿ ಹೊಂದುವುದು ಕಡ್ಡಾಯ. ಕೆಲವರಿಗೆ ಪಿಯುಸಿ ಅಂಕ ನಮೂದಿಸದೆ ಇರುವುದು, ಇನ್ನೂ ಕೆಲವರು ವ್ಯಾಸಂಗದ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳದವರಿಗೆ ಪರಿಶೀಲನಾ ಸ್ಲಿಪ್ ಡೌನ್ಲೋಡ್ ಆಗುತ್ತಿಲ್ಲ. ಇದರ ಜೊತೆಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳಮೀಸಲಾತಿ ಪ್ರಕಾರ (ಎಸ್ಸಿ ಎ, ಬಿ, ಸಿ) ಹೊಸ ಪ್ರಮಾಣ ಪತ್ರಗಳ ಆರ್ಡಿ ಸಂಖ್ಯೆ ದಾಖಲಿಸದೇ ಇರುವುದು ಕೂಡ ಡೌನ್ಲೋಡ್ ಆಗದಿರುವುದಕ್ಕೆ ಕಾರಣ ಎಂದು ಹೇಳಿದ್ದಾರೆ.
ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕಾದವರು ಕೆಇಎ ವೆಬ್ ಸೈಟ್ನಲ್ಲಿ ಇರುವ ಲಿಂಕ್ ಮೂಲಕ ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ನಿಗದಿ ಮಾಡಿಕೊಂಡು ಕೆಇಎ ಕಚೇರಿಗೆ ಖುದ್ದು ಭೇಟಿ ನೀಡಬೇಕು. ಪಿಯುಸಿ ಅಂಕಗಳನ್ನು ನಮೂದಿಸದೇ ಇರುವವರು ಹಾಗೂ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ತಮ್ಮ ಹೊಸ ಆರ್ಡಿ ಸಂಖ್ಯೆಯನ್ನು ಲಿಂಕ್ ಮೂಲಕವೇ ದಾಖಲಿಸಬಹುದು ಎಂದಿದ್ದಾರೆ.
ಪರಿಶಿಷ್ಟ ಜಾತಿಯ ಸುಮಾರು 18 ಸಾವಿರ ಅಭ್ಯರ್ಥಿಗಳು ಒಳ ಮೀಸಲಾತಿ ಪ್ರಕಾರ ತಮ್ಮ ಹೊಸ ಆರ್ಡಿ ಸಂಖ್ಯೆಯನ್ನು ದಾಖಲಿಸಿಲ್ಲ. ಸರ್ಕಾರದಿಂದ ಬರುವ ಸೀಟ್ ಮ್ಯಾಟ್ರಿಕ್ಸ್ ಒಳಮೀಸಲಾತಿ ಪ್ರಕಾರವೇ ಇರುತ್ತದೆ. ಹೀಗಾಗಿ ಕೇವಲ ಎಸ್ಸಿ ಎಂದಿರುವ ಆರ್ಡಿ ಸಂಖ್ಯೆ ನಮೂದಿಸುವಂತಿಲ್ಲ. ಇಂತಹವರು ಹೊಸ ಆರ್ಡಿ ಸಂಖ್ಯೆ ನಮೂದಿಸುವವರೆಗೂ ಪರಿಶೀಲನಾ ಚೀಟಿ ಡೌನ್ಲೋಡ್ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಬಿ.ಎಸ್ಸಿ ನರ್ಸಿಂಗ್ ರೋಮನ್ ಕ್ಯಾಥೋಲಿಕ್ ಕೋಟಾ: ಖುದ್ದು ಹಾಜರಿಗೆ ಸೂಚನೆ
ಬಿ.ಎಸ್ಸಿ ನರ್ಸಿಂಗ್ ಕೋರ್ಸುಗಳ ಪ್ರವೇಶಕ್ಕೆ ಕ್ರಿಶ್ಚಿಯನ್ ಧಾರ್ಮಿಕ ಅಲ್ಪಸಂಖ್ಯಾತ ಕೋಟಾ ಅಡಿಯಲ್ಲಿ ಸೀಟು ಪಡೆಯಲು ಅರ್ಹರಿರುವ ಹಾಗೂ ಯುಜಿಸಿಇಟಿ-26ರ ಅರ್ಜಿಯಲ್ಲಿ ಕ್ರಿಶ್ಚಿಯನ್ ಧಾರ್ಮಿಕ ಅಲ್ಪಸಂಖ್ಯಾತ ರೋಮನ್ ಕ್ಯಾಥೋಲಿಕ್ ವಿಭಾಗದಡಿ ಸೀಟು ಕೋರಿರುವ ಅಭ್ಯರ್ಥಿಗಳು ಜೂನ್ 22ರಿಂದ 24ರ ನಡುವೆ ನಗರದ ಸರ್ಜಾಪುರ ರಸ್ತೆಯಲ್ಲಿರುವ ಸೇಂಟ್ ಜಾನ್ಸ್ ನರ್ಸಿಂಗ್ ಕಾಲೇಜಿಗೆ ಅಗತ್ಯ ದಾಖಲೆಗಳೊಂದಿಗೆ ಖುದ್ದು ಪರಿಶೀಲನೆಗಾಗಿ ಹಾಜರಾಗಬೇಕೆಂದು ಸೂಚಿಸಿದ್ದಾರೆ.
ಸರ್ಕಾರ ನೀಡುವ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಸೀಟು ಹಂಚಿಕೆ ನಡೆಯಲಿದ್ದು, ಅಖಿಲ ಭಾರತ ಜನರಲ್ ಓಪನ್ ಮೆರಿಟ್ ಮತ್ತು ಕರ್ನಾಟಕ ರಾಜ್ಯ ಓಪನ್ ಮೆರಿಟ್ ಅಡಿಯಲ್ಲಿನ ಅಭ್ಯರ್ಥಿಗಳು ಹಾಜರಾಗುವ ಅವಶ್ಯಕತೆ ಇಲ್ಲ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
