ಚಿಕ್ಕಬಳ್ಳಾಪುರ: ಭಾರತ್ ಬಂದ್ಗೆ ಕರೆ ನೀಡಿದರೂ ಟೀ ಅಂಗಡಿ ಓಪನ್ ಮಾಡಿದ್ದೀಯಾ ಎಂದು ಮಾಲೀಕನ ಮೇಲೆ ಪ್ರತಿಭಟನಾಕಾರರು ಹಲ್ಲೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸಂಪಂಗಿ ವೃತ್ತದಲ್ಲಿನ ಎಸ್ಎಲ್ಎನ್ ಕಾಂಡಿಮೆಂಟ್ಸ್ ಶಾಪ್ ಎಂದಿನಂತೆ ಆರಂಭವಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಸಿಪಿಐಎಂ ಮುಖಂಡ ಲಕ್ಷ್ಮೀನಾರಾಯಣ ಎಂಬಾತ ಇಂದು ಬಂದ್ ಇದೆ. ನೀನು ಯಾಕೆ ಟೀ ಅಂಗಡಿ ಓಪನ್ ಮಾಡಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಅಂಗಡಿ ಮಾಲೀಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಟೀ ಅಂಗಡಿಯಲ್ಲಿದ್ದ ಹಾಲನ್ನೇ ಕಸಿದುಕೊಂಡು ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಈ ವೇಳೆ ಅಲ್ಲಿಯೇ ಇದ್ದ ಗ್ರಾಹಕರು ಹಾಲಿನ ಕೆಟಲ್ ವಾಪಾಸ್ ಕೊಡಿಸಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಬೆಳ್ಳಂಬೆಳಗ್ಗೆ ಆರಂಭವಾಗಿದ್ದ ಟೀ ಅಂಗಡಿಯನ್ನು ಬಂದ್ ಮಾಡುವಂತೆ ಅಂಗಡಿ ಮಾಲೀಕನ ಮೇಲೆ ಸಿಪಿಎಂ ಮುಖಂಡ ಒತ್ತಡ ಹೇರಿ ಬಲವಂತವಾಗಿ ಬಂದ್ ಮಾಡಿಸಿದ್ದಾರೆ.