ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‍ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ: ಅಶ್ವಥ್ ನಾರಾಯಣ

Public TV
2 Min Read
ashwath narayan 1

ಬೆಂಗಳೂರು: ಪ್ರತಿಭೆಯಿಂದಲೇ ತನ್ನ ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್‍ಗೆ ಪ್ರವೇಶ ಪಡೆದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಡುತಿನಿ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿ ಎಂ.ಮೌನೇಶ್‍ಗೆ ಡಿಪ್ಲೊಮಾ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಭರವಸೆ ನೀಡಿದ್ದಾರೆ.

ಶನಿವಾರದಂದು ಸಚಿವರು ಮೌನೇಶ್ ಮತ್ತವರ ಪೋಷಕರಿಗೆ ಕರೆ ಮಾಡಿ ಮಾತನಾಡಿದ ಸಚಿವರು, ಹತ್ತನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಯನ್ನು ಶ್ಲಾಘಿಸಿದರು. ಮುಂದಿನ ಮೂರು ವರ್ಷಗಳ ವಿದ್ಯಾಭ್ಯಾಸವನ್ನು ಸರ್ಕಾರ ಸಂಪೂರ್ಣ ಉಚಿತವಾಗಿ ನೀಡಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ: ಅಶ್ವಥ್ ನಾರಾಯಣ ಭರವಸೆ

ASHWATHNARAYAN medium

ಇದೇ ವೇಳೆ ಮೌನೇಶ್ ಪೋಷಕರ ಜೊತೆಯೂ ಮಾತನಾಡಿದ ಸಚಿವರು, ನಿಮ್ಮ ಪುತ್ರನಿಗೆ ಉಚಿತ ಶಿಕ್ಷಣ ನೀಡಲಾಗುವುದು. ಯಾವುದೇ ಚಿಂತೆ ನಿಮಗೆ ಬೇಡ. ಎಲ್ಲವನ್ನೂ ಸರ್ಕಾರವೇ ನೋಡಿಕೊಳ್ಳಲಿದೆ. ತದ ನಂತರ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಬೇಕಾದರೂ ಸರ್ಕಾರ ಸಹಕಾರ ನೀಡುತ್ತದೆ ಎಂದು ಸಚಿವರು ಹೇಳಿದರು. ವಿದ್ಯಾರ್ಥಿ ಮೌನೇಶ್ ಹಾಗೂ ಅವರ ಪೋಷಕರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

ವಿದ್ಯಾರ್ಥಿಯ ಮನೆ ಬಾಗಿಲಿಗೇ ತೆರಳಿ ಪ್ರವೇಶಾತಿ ನೀಡಿದ ಕೂಡ್ಲಿಗಿಯ ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಯನ್ನು ಇದೇ ವೇಳೆ ಅಶ್ವಥ್ ನಾರಾಯಣ ಅವರು ಮನಸಾರೆ ಶ್ಲಾಘಿಸಿದರು. ಪ್ರಾಂಶುಪಾಲ ಎಸ್.ಮಲ್ಲಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ ಸಚಿವರು, ನೀವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಆ ವಿದ್ಯಾರ್ಥಿಗೆ ತಗುಲುವ ಎಲ್ಲ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ. ನಿಮ್ಮದೇ ವೆಚ್ಚದಲ್ಲಿ ಬಡ ವಿದ್ಯಾರ್ಥಿಯೊಬ್ಬರನ್ನು ದತ್ತು ಪಡೆದು, ಅವರ ಮನೆ ಬಾಗಿಲಿಗೇ ಹೋಗಿ ದಾಖಲು ಮಾಡಿಕೊಂಡಿರುವ ಕ್ರಮ ಮಾದರಿಯಾದದ್ದು ಎಂದು ಹೇಳಿದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚನೆ- ಎರಡು ವಾರಗಳ ಬಳಿಕ ಆಡಳಿತ ಆರಂಭ?

Ashwath Narayana medium

ಪ್ರಾಂಶುಪಾಲರ ಕಾರ್ಯದ ಬಗ್ಗೆ ಮಾತನಾಡಿದ ಸಚಿವರು, ಇದೊಂದು ಅತ್ಯುತ್ತಮ ಪ್ರಯತ್ನ. ಆ ಪಾಲಿಟೆಕ್ನಿಕ್‍ನ ಪ್ರಾಚಾರ್ಯರು, ಬೋಧಕರ ಬದ್ಧತೆ ನನ್ನ ಹೃದಯ ಗೆದ್ದಿದೆ. ತಾಂತ್ರಿಕ ಮತ್ತು ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೇ ತಲುಪಿಸಬೇಕು ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವನ್ನು ಹಾಗೂ ಶೈಕ್ಷಣಿಕ ಸಮಾನತೆಯನ್ನೂ ಇವರು ಆರಂಭದಲ್ಲೇ ಸಾಕಾರ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವರ್ಷದಿಂದ ಹೊಸದಾಗಿ ಆರಂಭ ಮಾಡಲಾದ ಡಿಪ್ಲೊಮಾ ಕೋರ್ಸಗಳಲ್ಲಿ ಒಂದಾದ ಸೈಬರ್ ಫಿಸಿಕಲ್ ಸಿಸ್ಟಮ್ಸ್ ಅಂಡ್ ಸೆಕ್ಯೂರಿಟಿ ವಿಭಾಗದ ಕೊನೆಯ ಒಂದು ಸೀಟು ಉಳಿದಿತ್ತು. ಆ ಸೀಟಿಗೆ ಬಹಳ ಬೇಡಿಕೆ ಇದ್ದರೂ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಎಸ್.ಮಲ್ಲಪ್ಪ, ಇತರೆ ಬೋಧಕರು ಹಾಗೂ ಸಿಬ್ಬಂದಿ ತಾಲೂಕಿನ ಕುಡಿತಿನಿ ಗ್ರಾಮದ ಗುಡಿಸಲಿನಲ್ಲಿ ವಾಸಿಸುವ ಅಲೆಮಾರಿ ಜನಾಂಗದ ಬಡ ಪ್ರತಿಭಾವಂತ ವಿದ್ಯಾರ್ಥಿ ಎಂ.ಮೌನೇಶ್‍ಗೆ ನೀಡಿದ್ದಾರೆ. ಇದು ಒಳ್ಳೆಯ ಕ್ರಮ ಎಂದು ಸಚಿವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *