– ಪೊಲೀಸರಿಂದ ಶೂಟೌಟ್
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಂಗಳಮುಖಿ ಸೇರಿದಂತೆ ನಾಲ್ವರ ಗುಂಪು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರಿನ ತಿಲಕ್ ನಗರದ ಬಾರೊಂದರಲ್ಲಿ ನಡೆದಿದೆ.
ಕೊಲೆ ಮಾಡಿದ ಆರೋಪಿಗಳನ್ನು ತಬರೇಜ್, ಆನಂದ್, ಮಧು ಹಾಗೂ ಮಂಗಳಮುಖಿಯನ್ನು ಅರ್ಪಿತ ಎಂದು ಗುರುತಿಸಲಾಗಿದೆ. ಕಿಶೋರ್ ಕೊಲೆಯಾದ ದುರ್ದೈವಿ. ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಕಿಶೋರ್ ಬೈರಸಂದ್ರದ ನಿವಾಸಿಯಾಗಿದ್ದು, ಭಾನುವಾರ ಮಧ್ಯಾಹ್ನ ಗೆಳೆಯನ ಜೊತೆ ಕುಡಿಯಲು ಜಯನಗರದ ಈಸ್ಟ್ ಎಂಡ್ ಬಾರ್ ಗೆ ಹೋಗಿದ್ದಾನೆ.
ಇದೇ ಸಮಯದಲ್ಲಿ ಪಕ್ಕದ ಟೇಬಲ್ನಲ್ಲಿ ಕುಳಿತಿದ್ದ ನಾಲ್ವರ ಗ್ಯಾಂಗ್ ಕುಡಿದು ಜೋರಾಗಿ ಕೇಕೆ ಹಾಕಿದ್ದಾರೆ. ಈ ನಡುವೆ ಕಿಶೋರ್ ಜೋರಾಗಿ ಮಾತನಾಡಬೇಡಿ ಎಂದು ಸ್ವಲ್ಪ ನಿಧಾನಕ್ಕೆ ಮಾತನಾಡಿಕೊಳ್ಳಿ ಎಂದಿದ್ದಾನೆ. ಇಷ್ಟಕ್ಕೇ ಕ್ಯಾತೆ ತೆಗೆದ ಗ್ಯಾಂಗ್ ನಮ್ಮ ದುಡ್ಡು ನಮ್ಮ ಇಷ್ಟ ನೀನು ಯಾರು ಕೇಳೊಕೆ ಎಂದು ಗಲಾಟೆ ಶುರು ಮಾಡಿದೆ. ಹೀಗಿರುವಾಗಲೇ ನಾಲ್ವರ ಗ್ಯಾಂಗ್ ಕಿಶೋರ್ ಮೇಲೆ ದಾಳಿ ಮಾಡಿ, ಚಾಕುವಿನಿಂದ ಇರಿದು ಎಸ್ಕೇಪ್ ಆಗಿದೆ.
ವಿಶೇಷ ಅಂದರೆ ಆ ಗ್ಯಾಂಗ್ನಲ್ಲಿ ಮಂಗಳಮುಖಿ ಇದ್ದು, ಆಕೆ ಕೂಡ ಹಂತಕರಿಗೆ ಸಹಾಯ ಮಾಡಿದ್ದಾಳೆ. ಇದು ಬಾರ್ನ ಸಿಟಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಬಗ್ಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಬೀಸಲಾಗಿದೆ.
ಆರೋಪಿ ಮೇಲೆ ಶೂಟೌಟ್
ಈ ಪ್ರಕರಣ ಸಂಬಂಧ ಆರೋಪಿ ತಬರೇಜ್ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದಕ್ಕೆ ತಿಲಕನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಆರೋಪಿ ತಬರೇಜ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಪೇದೆ ಆನಂದ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಆರೋಪಿ ತಬರೇಜ್ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೆಲ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ ಆರೋಪಿ, ಬಿಡುಗಡೆ ಬಳಿಕ ಮತ್ತದೇ ಚಾಳಿ ಮುಂದುವರಿಸಿದ್ದ ಎಂದು ಹೇಳಲಾಗಿದೆ.