ಬಾಗಲಕೋಟೆ: ಓದಿಗಾಗಿ ಜರ್ಮನಿಗೆ ತೆರಳಿದ್ದ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿಯನ್ನು ಮಂಜುನಾಥ್(28) ಎಂದು ಗುರುತಿಸಲಾಗಿದ್ದು, ಇವರು ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದ ನಿವಾಸಿ. ಎಂಎಸ್ ಮಾಡಲೆಂದು ಒಂದೂವರೆ ವರ್ಷದ ಹಿಂದೆ ಜರ್ಮನಿಯ ಹ್ಯಾಮ್ಸ್ ಬರ್ಗ್ಗೆ ತೆರಳಿದ್ದರು.
ಕಳೆದ ಭಾನುವಾರದಿಂದ ಮಂಜುನಾಥ್ ಸಂಪರ್ಕಕ್ಕೆ ಸಿಗುತ್ತಿಲ್ಲ ಅಂತಾ ಅವರ ಮನೆಯವರು ಹಾಗೂ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಹ್ಯಾಮ್ಸ್ ಬರ್ಗ್ ನದಿ ಪಕ್ಕದಲ್ಲಿ ವಿದ್ಯಾರ್ಥಿಯ ಸೈಕಲ್, ಚಪ್ಪಲಿ, ಕನ್ನಡದಲ್ಲಿ ಬರೆದ ಪತ್ರ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪತ್ತೆಯಾದ ಸೈಕಲ್ ಹಾಗೂ ಚಪ್ಪಲಿ ಮಂಜುನಾಥ್ ಅವರದ್ದೇ ಅಂತಾ ಗೆಳೆಯನೊಬ್ಬ ತಿಳಿಸಿದ್ದಾರೆ. ಈ ಬಗ್ಗೆ ಹ್ಯಾಮ್ಸ್ ಬರ್ಗ್ ಪೊಲೀಸರಿಂದ ಬಾಗಲಕೋಟೆ ಎಸ್ಪಿ ಸಿಬಿ ರಿಷ್ಯಂತ್ ಅವರಿಗೆ ಮಾಹಿತಿ ರವಾನಿಸಿದ್ದು, ಸದ್ಯ ಮಗನ ನಿಗೂಢ ನಾಪತ್ತೆಯಿಂದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.