ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಈ ಸಂಬಂಧ ತನಿಖೆ ನಡೆದಿರುವಾಗಲೇ ಮತ್ತೋರ್ವ ಮಹಿಳೆಯ ಶವವು ಪಶುವೈದ್ಯೆ ಕೊಲೆಯಾದ ಸಮೀಪದ ಜಾಗದಲ್ಲಿ ಪತ್ತೆಯಾಗಿದೆ.
ಹೈದರಾಬಾದ್ ಸಮೀಪ ಶಂಶಾಬಾದ್ ನಗರದ ಹೊರ ವಲಯದ ಅಂಡರ್ ಬ್ರಿಡ್ಜ್ ಕೆಳಗೆ ಗುರುವಾರ ಪಶುವೈದ್ಯ ಶವ ಸಿಕ್ಕಿತ್ತು. ಇದೇ ಜಾಗದ ಸಮೀಪದಲ್ಲಿ ಮತ್ತೋರ್ವ ಮಹಿಳೆಯ ಮೃತದೇಹವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿ.ಸಿ.ಸಜ್ಜನಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು
26 ವರ್ಷದ ಪಶುವೈದ್ಯೆಯನ್ನು ಲಾರಿ ಚಾಲಕ, ಕ್ಲೀನರ್ ಮತ್ತಿಬ್ಬರು ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿದ್ದಾರೆ.
ಈ ವಿಚಾರವಾಗಿ ತೆಲಂಗಾಣ ಗೃಹ ಸಚಿವ ಮೊಹ್ಮದ್ ಮಹ್ಮೂದ್ ಅಲಿ ಅಮಾನವೀಯ ಹೇಳಿಕೆ ನೀಡಿದ್ದಾರೆ. ಪಶುವೈದ್ಯೆಯು ಯಾಕೆ ತಂಗಿಗೆ ಫೋನ್ ಮಾಡಿದ್ರು. ಅದರ ಬದಲಿಗೆ ಪೊಲೀಸರಿಗೆ ಫೋನ್ ಮಾಡಬಹುದಿತ್ತಲ್ಲವೇ ಅಂತ ಲೇವಡಿ ಮಾಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಸ್ಪಷ್ಟನೆ ಕೊಟ್ಟ ಮಸೂದ್, ಆಕೆ ನನ್ನ ಮಗಳ ಸಮಾನ. ನನ್ನಕಣ್ಣಲ್ಲೂ ನೀರು ಬಂದಿದೆ ಎಂದು ಹೇಳಿದ್ದಾರೆ.