ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ಬಳಿಕ ಉದ್ವಿಗ್ನಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮತ್ತೊಂದು ಹಲ್ಲೆ ನಡೆದಿದೆ.
ಮಂಗಳೂರು ಎಡಪದವು ಬಳಿ ಅಬೂಬಕರ್ ಸಿದ್ದಿಕ್(35) ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು
ಸೋಮವಾರ ರಾತ್ರಿ ಕ್ವಾರಿ ಕೆಲಸ ಮುಗಿಸಿ ಅಬೂಬಕರ್ ಸಿದ್ದಿಕ್ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಎಡಪದವು ವಿವೇಕಾನಂದ ಶಾಲೆ ಬಳಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಸಿದ್ದಿಕ್ ತಲೆ, ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರಿನಲ್ಲಿ ನಡೆದ ಕೋಮುಗಲಭೆಯ ನಿಯಂತ್ರಣಕ್ಕೆ ಬಾರದಿದ್ದಕ್ಕೆ ಸೋಮವಾರ ಮಧ್ಯಾಹ್ನವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೇ ಶಾಂತಿ ಕದಡುವ ಕೆಲಸ ಮಾಡಿದ್ರೂ ಯಾವುದೇ ಮುಲಾಜಿಲ್ಲದೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಅಂತ ಹೇಳಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ ಮಂಗಳೂರಿನಲ್ಲಿ ಮತ್ತೊಂದು ಹಲ್ಲೆ ನಡೆದಿದೆ.
ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.