ಬೆಂಗಳೂರು: ‘ಕುರುಕ್ಷೇತ’ ಸಿನಿಮಾ ಕಲಿಯುಗದ ಕರ್ಣ ಅಂಬರೀಶ್ ಅಭಿನಯಿಸಿರುವ ಕೊನೆಯ ಸಿನಿಮಾವಾಗಿದೆ. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಅಂಬಿ ಅಸ್ತಂಗತರಾಗಿದ್ದಾರೆ.
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ ದಲ್ಲಿ ಅಂಬರೀಶ್ ಅವರು ತಾತಾ ಭೀಷ್ಮಾಚಾರ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾಭಾರತದಲ್ಲಿ ಅರ್ಜುನನಿಂದ ಸೃಷ್ಟಿಯ ಬಾಣಗಳ ಶಯ್ಯೆಯಲ್ಲಿ ಭೀಷ್ಮ ಪಾತ್ರದಲ್ಲಿ ಅಭಿನಯಿಸಿರುವ ಅಂಬರೀಶ್, ಆಡುವ ಕಡೆಯ ಮಾತಿನ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸೋಮವಾರ ನಟ ಅಂಬರೀಶ್ ಅವರು ಕಂಠೀರವ ಸ್ಟುಡಿಯೋದಲ್ಲಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಂದು ಅವರ ಅಂತ್ಯಕ್ರಿಯೆ ನಡೆಯುವ ಸಮಯದಲ್ಲಿ ಸಿನಿಮಾ ತಂಡ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಅಂಬರೀಶ್, ಭೀಷ್ಮನ ಪಾತ್ರಧಾರಿಯಾಗಿ ಮರಣಶಯ್ಯೆಯಲ್ಲಿ ಮಲಗಿರುವ ವಿಡಿಯೋವನ್ನು ಲೀಕ್ ಮಾಡಿದ್ದಾರೆ.
ಮಹಾಭಾರತದಲ್ಲಿ ಭೀಷ್ಮ ಸತ್ಯವತಿಯಿಂದ ಇಚ್ಛಾಮರಣ ಹೊಂದುವ ವರವನ್ನು ಪಡೆದುಕೊಂಡಿದ್ದನು. ಅದರಂತೆಯೇ ಮಹಾಭಾರತ ಯುದ್ಧ ಮುಗಿದ ಬಳಿಕ ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಮಾಡಿರುತ್ತಾನೆ. ಯುದ್ಧದ ನಂತರ ತನ್ನ ಇಚ್ಛೆಯಂತೆ ಮರಣ ಹೊಂದುತ್ತಾನೆ. ಇದೇ ಸನ್ನಿವೇಶ ‘ಕುರುಕ್ಷೇತ್ರ’ ಸಿನಿಮಾದಲ್ಲೂ ಇದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ ‘ಕುರುಕ್ಷೇತ್ರ’ದಲ್ಲಿ ಅಂಬರೀಶ್ ‘ಭೀಷ್ಮ’ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ‘ಕುರುಕ್ಷೇತ್ರ’ ಸಿನಿಮಾದ ಅಂಬರೀಶ್ ಭಾಗದ ಶೂಟಿಂಗ್ ಮುಗಿದಿತ್ತು. ಅಂಬರೀಶ್ ‘ಭೀಷ್ಮ’ನ ಪಾತ್ರಕ್ಕೆ ಡಬ್ಬಿಂಗ್ ಕೂಡ ಮುಗಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾಗುವ ಮೊದಲೇ ಅಂಬಿ ವಿಧಿವಶರಾಗಿದ್ದಾರೆ.
https://www.youtube.com/watch?v=Jaf-jLabtZI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv