ಬೆಂಗಳೂರು: ಕಲಿಯುಗ ಕರ್ಣ ಅಂಬರೀಶ್ ಜೊತೆ ಹಲವರು ತುಂಬಾ ಆತ್ಮೀಯ ಒಡನಾಟ ಇಟ್ಕೊಂಡಿದ್ರು. ಅಂಥವರಲ್ಲೊಬ್ಬರು ನಟ ಜಗ್ಗೇಶ್. ಜಗ್ಗೇಶ್ – ಅಂಬರೀಶ್ ಒಡನಾಟ ವೈಯಕ್ತಿಕ, ಕೌಟುಂಬಿಕ, ಚಿತ್ರರಂಗ ಹಾಗೂ ರಾಜಕೀಯವಾಗಿತ್ತು. ಜಗ್ಗೇಶ್ ಅಂಬರೀಶ್ ಕುರಿತ ತಮ್ಮ ಮನದ ಮಾತುಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.
ಅಂಬರೀಶ್ ಅವರ ಜೊತೆ ಮೊದಲು ನಾನು ನಟಿಸಿಲ್ಲ. ನನ್ನ ದೊಡ್ಡ ಮಗ ಗುರುರಾಜ್ ನಟಿಸಿದ್ದನು. ಮಲ್ಲಿಗೆ ಹೂವೆ ಎಂಬ ಚಿತ್ರಕ್ಕೆ ಒಂದು ಮಗು ಬೇಕು ಅಂತ ಕೇಳಿದಾಗ ನಿರ್ದೇಶಕರು ಜಗ್ಗೇಶ್ ಮಗನೇ ಇದ್ದಾನೆ ಅಂತ ಹೇಳಿ ಕರೆದುಕೊಂಡು ಬರಲು ಹೇಳಿದ್ದರು. ಹೀಗಾಗಿ 2 ವರ್ಷದ ಗುರುರಾಜ್ ಅವರ ಜೊತೆ ಅಭಿನಯಿಸಿದ್ದನು. ಆ ಸಂದರ್ಭದಲ್ಲೇ ನಮ್ಮಿಬ್ಬರ ಗೆಳೆತನ ಆರಂಭವಾಯಿತು ಅಂದ್ರು.
ಮೊದಲು ಅವರು ನನ್ನ ನೋಡಿ ತಮಿಳಿನವನು ಅಂದುಕೊಂಡು ತಮಿಳಿನಲ್ಲೇ ಮಾತು ಶುರು ಮಾಡಿದ್ರು. ಆಗ ನಾನು ಇಲ್ಲ ನಾನು ಗೌಡನೇ ಅಂತ ಹೇಳಿದ್ದೆ. ತುಮಕೂರು ಕಡೆಯವರು ಅಂತ ಹೇಳಿದ ಬಳಿಕ ಹೌದೆನು ಅಂತ ಮಧ್ಯಾಹ್ನ ಒಟ್ಟಿಗೆ ಕುಳಿತು ಮಾತನಾಡಿದ್ದೆವು ಅಂತ ತಿಳಿಸಿದ್ರು.
ಇದಾದ ಬಳಿಕ ಅವರು ನನ್ನ ಬಳಿ ತುಂಬಾನೇ ಆತ್ಮೀಯತೆಯಿಂದ ನಡೆದುಕೊಂಡರು. ರೌಡಿ ಎಂಎಲ್ ಎ ಅನ್ನೋ ಚಿತ್ರವೊಂದನ್ನು ಮಾಡಿದ್ದೆ. ಆ ಸಿನಿಮಾ ಮಾಡಲು 35 ಸಾವಿರ ಸಂಬಳ ಕೇಳಿದ್ದೆ. ಆಗ ಮ್ಯಾನೇಜರ್ ಬಂದು ನಿನ್ನ ಮಕಕ್ಕೆ 35 ಸಾವಿರ ಅಂತ ಹೇಳಿ ನನ್ನ ಮೇಲಿಂದ ಕೆಳಗೆವರೆಗೆ ನೋಡಿದ್ದ. ಇದರಿಂದ ನನಗೆ ಬೇಜಾರಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆಸಿ ಸಿಟ್ಟುಮಾಡಿಕೊಂಡಿದ್ದೆ. ಸಂಜೆ ಅಂಬರೀಶ್ ಬಳಿ ಹೋಗಿ ಆತ, ಯಾರು ಯಾರು ಏನೇನು ಮಾಡಿದ್ದಾರೆ ಅಂತ ಲಿಸ್ಟ್ ಕೊಟ್ಟಿದ್ದ. ಅದರಲ್ಲಿ ಒಂದು ಪಾತ್ರಕ್ಕೆ ಸಿಹಿಕಹಿ ಚಂದ್ರುನ ಹಾಕಿದ್ದೀರಿ ಅಂತ ಅಂಬಿ ಪ್ರಶ್ನಿಸಿದ್ದರು. ಈ ವೇಳೆ ಮ್ಯಾನೇಜರ್ ಜಗ್ಗೇಶ್ ಜಾಸ್ತಿ ಹಣ ಕೇಳಿಬಿಟ್ಟ ಅದಕ್ಕೆ ಚಂದ್ರುನ ಹಾಕಿದ್ದೀವಿ ಅಂತ ಹೇಳಿದ್ರಂತೆ. ಅವಾಗ ಅಂಬಿ ಎಷ್ಟು ಕೇಳಿದ ಅಂತ ಮರು ಪ್ರಶ್ನಿಸಿದ್ರು. ಈ ವೇಳೆ ಮ್ಯಾನೇಜರ್ 35 ಸಾವಿರ ಅಂದಿದ್ದಾರೆ. ಇದರಿಂದ ಸಿಟ್ಟುಗೊಂಡ ಅಂಬಿ, ನನ್ನ ಮಗನೇ ಅವನು ಒಂದು ಲಕ್ಷ ತೆಗೆದುಕೊಂಡಿದ್ದ. ನಾನೇ ಅವನಿಗೆ 35 ಕೇಳು ಅಂತ ಹೇಳಿದ್ದು. ಇದೀಗ ನೀನು ಹೇಳಿದ ಹಾಗೂ ಅವನನ್ನು ಬೇಡ ಅಂದ ತಪ್ಪಿಗೆ ಅವನಿಗೆ 50 ಸಾವಿರ ಕೊಡು ಅಂತ ಹೇಳಿದ್ದರು. ಕೊಟ್ರೆ ಸಿನಿಮಾ ಆರಂಭಿಸುವುದಾಗಿ ಅಂಬಿ ಹೇಳಿದ್ದರು. ಅದೇ ದಿನ ಆ ಮ್ಯಾನೇಜರ್ ಬಂದು ನನ್ನ ಕಾಲಿಗೆ ಬಿದ್ದಿದ್ದಾನೆ. ಅಂಬರೀಶ್ ಅವರು ಬೈದ್ರು. ಲಕ್ಷ ಕೇಳೋನಿಗೆ ನೀವು ಕಮ್ಮಿ ಹೇಳಿ ಅಪಮಾನ ಮಾಡಿದ್ದೀರಿ ಅಂತ ಬೈದರು ಅಂತ ಹೇಳಿದ. ಬಳಿಕ ನಾನು ಆ ಸಿನಿಮಾದಲ್ಲಿ ನಟಿಸಿದ್ದೆ ಅಂತ ಅಂದಿನ ದಿನವನ್ನು ಮೆಲುಕು ಹಾಕಿಕೊಂಡರು.
ಅದು ಒಬ್ಬ ಕಲಾವಿದನಿಗೆ ಇದ್ದಂತಹ ಅಭಿಮಾನ. ನನ್ನಂತೆ ಇನ್ನೊಬ್ಬ ಕಲಾವಿದನೂ ಚೆನ್ನಾಗಿರಬೇಕು ಅನ್ನೋದು ದೊಡ್ಡ ಗುಣ ಅವರಲ್ಲಿತ್ತು. ಇತ್ತೀಚೆಗೆ ಕಲಾವಿದರ ಸಂಘದಲ್ಲೇ ಅವರನ್ನು ಭೇಟಿ ಮಾಡಿದ್ದೆ. ಸುಮಾರು 4 ತಾಸು ಮಾತುಕತೆ ನಡೆಸಿದ್ದೆವು. ತುಂಬಾ ಜನರಿಗೆ ಅನ್ನ ಹಾಕಿ, ಆನಂದಪಡುವ ಜೀವ ಅದು. ನಾನು ಹೋಗ್ತೀನಿ ಅಂದ್ರೂ ಬಿಡದೆ ಕೂರಿಸಿ ಊಟ ಹಾಕಿ ತಿನ್ನಿಸಿ, ಭಾವನಾತ್ಮಕವಾಗಿ ಮಾತನಾಡಿಸುವ ಒಳ್ಳೆಯ ಗುಣ ಅವರಲ್ಲಿತ್ತು ಅಂದ್ರು.
ರಾಜ್ ಕುಮಾರ್ ಕನಸನ್ನು ನೀನು ಸಾಕಾರ ಮಾಡಿಬಿಟ್ಟಿದ್ದೀಯಾ. ಇದಕ್ಕೋಸ್ಕರ ನಾನು ತುಂಬಾನೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚಿತ್ರರಂಗದ ವತಿಯಿಂದ ತುಂಬಾನೇ ಥ್ಯಾಂಕ್ಸ್ ಹೇಳುತ್ತೇನೆ. ಯಾಕಂದ್ರೆ ರಾಜ್ ಕುಮಾರ್ ಅವರಿಗೆ ಎಲ್ಲಾ ಕಲಾವಿದರು ನೆರಳಲ್ಲಿ ಕುಳಿತುಕೊಳ್ಳಬೇಕು ಅನ್ನೊ ಒಂದು ದೊಡ್ಡ ಕನಸಿತ್ತು ಇತ್ತು. ಆದ್ರೆ ಅದನ್ನು ಯಾರಿಗೂ ಮಾಡಲು ಸಾಧ್ಯವಾಗಿರಲಿಲ್ಲ. ಯಾರಿಗೂ ಒಂದೇ ಒಂದು ಕೂದಲು ಅಲ್ಲಾಡಿಸಲು ಸಾಧ್ಯವಾಗಿಲ್ಲ. ಆದ್ರೆ ಅಂಬರೀಶ್ ಅವರು ತಾನೇ ನಿಂತು ಸರ್ಕಾರಗಳ ಜೊತೆ ಜಗಳವಾಡುತ್ತಿದ್ದರು. ಅವರಿಗೆ ಒಂದು ಪ್ರೀತಿ ಇತ್ತು. ಎಲ್ಲಾರಿಗೂ ಪಕ್ಷ ಇತ್ತು. ಆದ್ರೆ ಅಂಬರೀಶ್ ಅವರಿಗೆ ಪಕ್ಷ ಇರಲಿಲ್ಲ. ನಾನು ಅವರ ಜೊತೆ ಹೋಗಿ 4 ಜನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆ. ಆ ಸಂತೋಷವನ್ನು ನಾನು ಕಣ್ಣಾರೆ ಕಂಡಿದ್ದೇನೆ ಅಂದ್ರು.
ಅಂಬಿ ಸಾವು ನನಗೂ ನೋವು ತಂದಿದೆ. ಸಾವು ಖಚಿತ. ಅವರು ಇನ್ನೂ 15- 20 ವರ್ಷ ನಮ್ಮ ಜೊತೆ ಇರ ಬೇಕಿತ್ತು. ಆದ್ರೂ ಅವರ ಆಥ್ಮಕ್ಕೆ ಶಾಂತಿ ಸಿಗಲಿ ಅಂತ ಅವರು ಸಂತಾಪ ಸೂಚಿಸಿದ್ರು.
https://www.youtube.com/watch?v=E1eeCqAkbf0
https://www.youtube.com/watch?v=t5JPHT_oqa0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv