ಭೋಪಾಲ್: ಎತ್ತಿನ ಗಾಡಿಯನ್ನು ಗ್ರಂಥಾಲಯವನ್ನಾಗಿ ಮಾಡಿಕೊಂಡು ಬುಡಕಟ್ಟು ವಿದ್ಯಾರ್ಥಿಗಳ ಮನೆ- ಮನೆಗೆ ತೆರಳಿ ಪುಸ್ತಕ ಹಂಚುತ್ತಿರುವ ಶಿಕ್ಷಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮಧ್ಯಪ್ರದೇಶದ ಶಿಕ್ಷಕಿಯೊಬ್ಬರು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಶಿಕ್ಷಕಿ ಮಲಾ ದಾವಂಡೆ ಅವರ ಕೆಲಸಕ್ಕೆ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೇತುಲ್ ಜಿಲ್ಲೆಯ ಭೈನ್ಸ್ದೇಹಿಯ ಬುಡಕಟ್ಟು ಪ್ರದೇಶದ ಹಳ್ಳಿಯೊಂದರ ಶಾಲೆಯ ಶಿಕ್ಷಕಿಯಾದ ಕಮಲಾ ದಾವಂಡೆ ಅವರು, ಸಂಚಾರಿ ಗ್ರಂಥಾಲಯವನ್ನು ಎತ್ತಿನ ಗಾಡಿಯಲ್ಲಿ ಸ್ಥಾಪಿಸಿದ್ದಾರೆ. ಮನೆ ಮನೆಗೆ ಹೋಗಿ ಬಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಈ ಮಕ್ಕಳು ಆನ್ಲೈನ್ ತರಗತಿಗಳನ್ನು ಕೇಳಲು ಯಾವುದೇ ಸೌಲಭ್ಯವನ್ನು ಹೊಂದಿಲ್ಲ. ಈ ಮಕ್ಕಳು ರೇಡಿಯೋ ಉಪನ್ಯಾಸಗಳನ್ನೇ ಅವಲಂಬಿಸಿದ್ದಾರೆ. ಮಕ್ಕಳಿಗೆ ಸಹಾಯವಾಗಲೆಂದು ಕಮಲಾ ಟೀಚರ್ ಮಕ್ಕಳ ಮನೆ ಮನೆಗೆ ತೆರಳಿ ಪುಸ್ತಕಗಳನ್ನು ನೀಡುವ ಮೂಲಕ ಓದಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್
ಕಮಲಾ ದಾವಂಡೆ ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡಿ, ಈ ಗ್ರಾಮದಲ್ಲಿರುವ ಶಾಲೆಯಲ್ಲಿ 87 ಮಕ್ಕಳು ಮತ್ತು ಮೂವರು ಶಿಕ್ಷಕರಿದ್ದಾರೆ. ಕೋವಿಡ್-19 ಕಾರಣ ರಜೆಯಲ್ಲಿದ್ದಾರೆ. ಹೀಗಾಗಿ, ಸದ್ಯಕ್ಕೆ ನಾನೊಬ್ಬಳೇ ಇಲ್ಲಿ ಇರುವ ಶಿಕ್ಷಕಿಯಾಗಿದ್ದನೆ. ಮಕ್ಕಳಿಗೆ ಪುಸ್ತಕಗಳನ್ನು ಹಂಚುವುದು ಅನಿವಾರ್ಯವಾಗಿತ್ತು. ಎಲ್ಲ ಪುಸ್ತಕಗಳನ್ನು ಎತ್ತಿನ ಗಾಡಿಯಲ್ಲಿ ಇಟ್ಟುಕೊಂಡು ಮೊಹಲ್ಲಾ ತರಗತಿಯ ಬ್ಯಾನರ್ ಹಾಕಿಕೊಂಡು ಮನೆ ಮನೆಗೆ ತೆರಳಿ ಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತಿದ್ದೇನೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ. ಇವರ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್ ಮಾಡಿದ ವಧು