ಚಿತ್ರದುರ್ಗ: ಭಾರೀ ಮಳೆಯಿಂದಾಗಿ ರಭಸವಾಗಿ ಹರಿಯುತ್ತಿರುವ ಹಳ್ಳವೊಂದರಲ್ಲಿ 14 ಕುರಿಗಳು ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡ ತೇಕಲವಟ್ಟಿ ಗ್ರಾಮದ ಹಳ್ಳದಲ್ಲಿ ನಡೆದಿದೆ.
ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ದೊಡ್ಡ ತೇಕಲವಟ್ಟಿಯ ಹಳ್ಳ ಭರ್ತಿಯಾಗಿ ರಭಸವಾಗಿ ಹರಿಯುತ್ತಿದೆ. ಈ ವೇಳೆ ಕುರಿಗಳನ್ನು ಮೇಯಿಸಲು ತೆರಳಿದ್ದ ಈಶ್ವರಪ್ಪ ಎಂಬವರ 4 ಕುರಿಗಳು, ರೇವಣ್ಣನ 4 ಕುರಿಗಳು ಹಾಗೂ ರಂಗಪ್ಪ ಎಂಬವರಿಗೆ ಸೇರಿದ 2 ಕುರಿಗಳು ಹಳ್ಳ ದಾಟುವ ಸಂದರ್ಭದಲ್ಲಿ ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿವೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕ ಅರೆಸ್ಟ್
ಈ ವೇಳೆ ಸಾವನ್ನಪ್ಪಿದ್ದ 10 ಕುರಿಗಳು ಕುರಿಗಾಹಿಗಳ ಸಾಹಸದಿಂದ ಕೈಗೆ ಸಿಕ್ಕಿವೆ. ಆದರೆ ಇನ್ನೂ 4 ಕುರಿಗಳು ನೀರಲ್ಲೇ ಕೊಚ್ಚಿ ಹೋಗಿವೆ. ಹೀಗಾಗಿ ಸಾವನ್ನಪ್ಪಿರುವ ಕುರಿಗಳನ್ನು ವಾಪಸ್ ತಂದು ತಮ್ಮ ಮನೆಯ ಮುಂದೆ ರಾಶಿ ಹಾಕಿರುವ ಕುರಿಗಾಹಿಗಳು ಕಣ್ಣೀರಿಡುತ್ತಿರುವ ದೃಶ್ಯ ಎಲ್ಲರ ಮನಕಲಕುವಂತಿದೆ.
ಕಳೆದ ವರ್ಷದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿರುವ ಕುರಿಗಾಹಿಗಳು ಕಷ್ಟಪಟ್ಟು ಸಾಕಿರೋ ಕುರಿಗಳು ಕಣ್ಮುಂದೆಯೇ ಕೊಚ್ಚಿ ಹೋದ ದೃಶ್ಯ ನೆನೆದು ಕಣ್ಣೀರಿಡ್ತಾ, ಕಂಗಾಲಾಗಿದ್ದಾರೆ. ಕುರಿಗಾಹಿಗಳ ಬದುಕಿಗೆ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡಿರೋ ಹಿನ್ನೆಲೆ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಹೀಗಾಗಿ ಇದೊಂದು ಅತಿವೃಷ್ಟಿ ಎಂದು ಪರಿಗಣಿಸಿ ಈ ಕೂಡಲೇ ತಾಲೂಕು ಆಡಳಿತ ಹಾಗೂ ಸರ್ಕಾರ ಕುರಿಗಾಹಿಗಳ ನೆರವಿಗೆ ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ