ಮೈಸೂರು: ಕಾಂಗ್ರೆಸ್ನವರಂತೆ ನಾವು ನಮ್ಮ ಪಕ್ಷದವರ ಹೆಸರನ್ನು ಇಡುತ್ತಿಲ್ಲ. ಸೋನಿಯಾ ಗಾಂಧಿಯನ್ನು ಓಲೈಸಲು ಕಾಂಗ್ರೆಸ್ ಎಲ್ಲದಕ್ಕೂ ರಾಜೀವ್ ಗಾಂಧಿ ಹೆಸರು ಬಳಸಿತ್ತು. ನಮಗೆ ಆ ರೀತಿ ಅನಿವಾರ್ಯತೆ ಏನು ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆ ವಿಚಾರದಲ್ಲಿ ರಾಜೀವ್ ಗಾಂಧಿಗು ರಾಷ್ಟ್ರೀಯ ಉದ್ಯಾನವನಕ್ಕು ಏನು ಸಂಬಂಧ? ಸಂಬಂಧವೇ ಇಲ್ಲದವರನ್ನು ಅನೇಕ ಕೇಂದ್ರ ಹಾಗೂ ಸಂಸ್ಥೆಗಳಿಗೆ ಹೆಸರಿಡಲಾಗಿದೆ. ಹೀಗಾಗಿ ಇದನ್ನು ಬದಲಾಯಿಸಲು ಮುಂದಾಗಿದ್ದೇವೆ ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಭಾರತದ ಮೊದಲ ಲೆ.ಜನರಲ್. ಸ್ಥಳೀಯವಾಗಿಯು ಅವರ ಹೆಸರು ರಾಷ್ಟ್ರೀಯ ಉದ್ಯಾನವನಕ್ಕೆ ಸೂಕ್ತ. ಅವರಿಗೆ ಗೌರವ ಸೂಚಿಸುವ ಭಾಗವಾಗಿ ಹೆಸರು ಬದಲಾವಣೆ ಮಾಡುತ್ತಿದ್ದೇವೆ. ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡುತ್ತಿದ್ದೇವೆ. ರೈಲ್ವೆ ನಿಲ್ದಾಣಕ್ಕೂ ರಾಜ ಮನೆತನದವರ ಹೆಸರು ಇಡುತ್ತಿದ್ದೇವೆ. ನಾವು ಸಕಾರಣದೊಂದಿಗೆ ಹೆಸರು ಇಡುತ್ತೇವೆ ವಿನಹಃ, ಯಾರನ್ನೋ ಓಲೈಸಲು ಅಲ್ಲ ಎಂದು ಹೆಸರು ಬದಲಾವಣೆಯನ್ನು ಪ್ರತಾಪ್ ಸಿಂಹ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರಿನ ಜನರಿಗೆ ನವಿಲು ಯಾವುದು? ಕೆಂಭೂತ ಯಾವುದು ಎಂಬುದು ಗೊತ್ತಿದೆ: ಮಹದೇವಪ್ಪ
ಹಬ್ಬಕ್ಕೆ ನಿರ್ಬಂಧ, ಹಠ ಬೇಡ:
ಗಣೇಶ್ ಹಬ್ಬ ಆಚರಣೆಗೆ ಹಲವು ನಿರ್ಬಂಧ ವಿಚಾರದ ಎದ್ದಿರುವ ವಿರೋಧದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ನಿಬರ್ಂಧ ಹೇರಿ ಹಬ್ಬಕ್ಕೆ ಅನುಮತಿ ನೀಡಿದೆ. ನಾವು ಮೊದಲಿನ ರೀತಿಯೇ ಮೆರವಣಿಗೆ ಮಾಡಬೇಕೆಂಬ ಹಠ ಹಿಡಿಯುವ ಸ್ಥಿತಿ ಇಲ್ಲ. ಸರ್ಕಾರವೇನು ಸಂಪೂರ್ಣ ನಿರ್ಬಂಧ ಮಾಡಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಜೀವ ಇದ್ದರೆ ಮುಂದೆ ಇನ್ನು ಅದ್ದೂರಿಯಾಗಿ ಹಬ್ಬ ಆಚರಿಸಬಹುದು. ಯಾರು ದಯವಿಟ್ಟು ಹಠಕ್ಕೆ ಮುಂದಾಗಬೇಡಿ. ಸರ್ಕಾರ ಹೇಳಿರುವ ಮಾರ್ಗಸೂಚಿ ಪಾಲಿಸಿ ಹಬ್ಬ ಆಚರಿಸಿ ಎಂದು ಕರೆ ನೀಡಿದರು.