ರಾಯಚೂರು: ಲಾಕ್ಡೌನ್ ಹಿನ್ನೆಲೆ ಬಹುತೇಕ ಎಲ್ಲಾ ಕೆಲಸಗಳಿಗೂ ಪೂರ್ಣವಿರಾಮ ಬಿದ್ದಿದೆ. ಇಂತಹ ಸಂದರ್ಭದಲ್ಲಿ ವಿಧವಾ ವೇತನ ,ವೃದ್ಧಾಪ್ಯ ವೇತನ , ಕಲಾವಿದರ ಪಿಂಚಣಿಯನ್ನ ಸರ್ಕಾರ ಸರಿಯಾಗಿ ನೀಡದೆ ತಡೆಹಿಡಿದಿರುವುದು ಬಡವರಿಗೆ, ವಯೋವೃದ್ಧರು, ಮಹಿಳೆಯರಿಗೆ ಸಂಕಷ್ಟದ ಪರಿಸ್ಥಿತಿ ತಂದೊಡ್ಡಿದೆ. ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ವಿಧವಾ ವೇತನ ನೀಡುವಂತೆ ಮಹಿಳೆಯರು ಪ್ರತಿಭಟನೆ ಮಾಡಿದರು.
ಐದು ತಿಂಗಳಿಂದ ವಿಧವಾ ವೇತನವಿಲ್ಲದೆ ಮಹಿಳೆಯರು, ವೃದ್ಧೆಯರು ಪರದಾಡುತ್ತಿದ್ದಾರೆ. ಲಾಕ್ಡೌನ್ ನಿಂದ ಕೆಲಸವೂ ಇಲ್ಲದೆ ಯಾವ ಆದಾಯವೂ ಇಲ್ಲದಂತಾಗಿದೆ. ಒಂದೆಡೆ ಕೆಲಸವೂ ಇಲ್ಲ, ಇನ್ನೊಂದೆಡೆ ವಿಧವಾ ವೇತನವೂ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ 5 ತಿಂಗಳಿಂದ ವಿಧವಾ ವೇತನ ನೀಡದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ವಿಧವಾ ವೇತನ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಹಿಳೆಯರು ಮನವಿ ಸಲ್ಲಿಸಿದರು.
ಲಾಕ್ಡೌನ್ ಹಿನ್ನೆಲೆ ಓಡಾಡಲು ಆಗದೇ ವೃದ್ಧರು ಮನೆಯಲ್ಲೇ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ನಮ್ಮ ಕಷ್ಟವನ್ನ ಅರ್ಥಮಾಡಿಕೊಂಡು ಕೂಡಲೇ ವೇತನ ಬಿಡುಗಡೆ ಮಾಡಬೇಕು ಅಂತ ಮಹಿಳೆಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.