ಚಾಮರಾಜಪೇಟೆಯ ಮುಸ್ಲಿಂ ಅಭ್ಯರ್ಥಿಗೆ ನೀಡಿದ ಹಣ ಬಿಜೆಪಿ ಹಣವೇ – ಜಮೀರ್‌ಗೆ ಎಚ್‌ಡಿಕೆ ತಿರುಗೇಟು

Public TV
2 Min Read
HDK ZAMEER

ಬೆಂಗಳೂರು: ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಲು ನಾನು ಬಿಜೆಪಿಯಿಂದ ಹಣ ಪಡೆದಿರುವುದಾಗಿ ಮಿತ್ರರೊಬ್ಬರು ಹೇಳಿದ್ದಾರೆ. ಆಗಲಿ, 2005ರಲ್ಲಿ ಎಸ್‌ಎಂ ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್‌ ಬಿಜೆಪಿಯಿಂದ ದುಡ್ಡು ತಂದಿತ್ತೇ ಎಂದು ಪ್ರಶ್ನಿಸುವ ಮೂಲಕ ಎಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ಗೆ ತಿರುಗೇಟು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಬಸವ ಕಲ್ಯಾಣದಲ್ಲಿ 10 ಕೋಟಿ ರೂ. ಪಡೆದು ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಜಮೀರ್‌ ಆಹ್ಮದ್‌ ಆರೋಪಿಸಿದ್ದರು. ಈ ಆರೋಪಕ್ಕೆ ಟ್ಟಿಟ್ಟರ್‌ನಲ್ಲಿ ಎಚ್‌ಡಿಕೆ ಉತ್ತರ ನೀಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
2005ರ ಚಾಮರಾಜಪೇಟೆ ಉಪಚುನಾವಣೆಯ ಆ ‘ಮುಸ್ಲಿಂ ಅಭ್ಯರ್ಥಿ’ಗಾಗಿ ಮಾಜಿ ಪ್ರಧಾನಿ ದೇವೇಗೌಡರು ಗಲ್ಲಿಗಲ್ಲಿಗಳಲ್ಲಿ ಸುತ್ತಿದ್ದರು. ಬೆವರು ಹರಿಸಿದ್ದರು. ದೇವೇಗೌಡರಂಥವರು ಅಂದು ಅಷ್ಟು ಕಷ್ಟಪಟ್ಟು ಉಪಚುನಾವಣೆ ನಡೆಸಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ, ಮನದಾಳದಿಂದ, ಪ್ರಾಮಾಣಿಕ ಉತ್ತರ ಕೊಡಬಹುದೇ?

ಚಾಮರಾಜಪೇಟೆ ಉಪಚುನಾವಣೆಯ ಮತದಾನಕ್ಕೆ ಇನ್ನು 2 ದಿನಗಳು ಬಾಕಿ ಉಳಿದಿವೆ ಎನ್ನುವಾಗ ನಮ್ಮ ‘ಮುಸ್ಲಿಂ ಅಭ್ಯರ್ಥಿ’ ಏಕಾಏಕಿ ಕಾಣೆಯಾಗಿದ್ದರು. ಕಾರಣ ಹುಡುಕಿದಾಗ ಹಣದ ಕೊರತೆ ಎಂಬ ಅಂಶ ಗೊತ್ತಾಯಿತು. ಅಂದು ಶಿವಮೊಗ್ಗ ಪ್ರವಾಸದಲ್ಲಿದ್ದ ನಾನು ಓಡೋಡಿ ಬಂದು ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೆ. ಅಂದು ನಾನು ತಂದ ಸಾಲ ಬಿಜೆಪಿಯ ಹಣವಾಗಿತ್ತೇ?

HDK Zameer 1

ಅಂದು ಚಾಮರಾಜಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್‌ ‘ಮುಸ್ಲಿಂ ಅಭ್ಯರ್ಥಿ’ಯನ್ನು ಗುರುತಿಸಿತ್ತೇ? ಅಂದು ಬಿಜೆಪಿಯನ್ನು ಗೆಲ್ಲಿಸಲೆಂದು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದಿದ್ದರೆ ಇಂದು ನನ್ನ ವಿರುದ್ಧ ಆರೋಪ ಮಾಡಲು ಆ ನಾಯಕರೇ ಇರುತ್ತಿರಲಿಲ್ಲ. ಜೆಡಿಎಸ್‌ ಪಕ್ಷದ ತ್ಯಾಗಕ್ಕಾಗಿ ಕಿಂಚಿತ್ತು ಕೃತಜ್ಞತೆ ಉಳಿಯದಿದ್ದರೆ ಹೇಗೆ?

ಸನ್ಮಿತ್ರರು ನಮ್ಮಲ್ಲಿದ್ದಾಗ ಅವರನ್ನು ಬೆಂಗಳೂರು ಕೇಂದ್ರ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರ ಸೋದರನನ್ನು ಚಿಕ್ಕಪೇಟೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಇದೆಲ್ಲ ಮಾಡಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಜೆಡಿಎಸ್‌ ಪಕ್ಷ ಮತ್ತು ಇದರ ಕಾರ್ಯಕರ್ತರು ಎಲ್ಲರನ್ನೂ ಬೆಳೆಸಿದೆ. ಹೊರಗೆ ಹೋದವರನ್ನು ಹರಸಿದೆ. ಕೃತಜ್ಞತೆ ಇರಲಿ.

ZAMEER HDK 2

2008ರ ಆಪರೇಷನ್‌ ಕಮಲದ ನಂತರ ನಡೆದ 20ಕ್ಕೂ ಹೆಚ್ಚು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲದೇ ಮುಖಭಂಗ ಅನುಭವಿಸಿತ್ತು. ಅದರ ಹಿಂದೆ ಯಾವ ನಾಯಕರು ಇದ್ದರು? ಎಷ್ಟು ಹಣ ಪಡೆದಿದ್ದರು? ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಸನ್ಮಿತ್ರರು ತಿಳಿಯಲಿ. ಹೇಗೂ ಅವರ ಅಕ್ಕಪಕ್ಕದಲ್ಲೆ ಇದ್ದೀರಲ್ಲ… ಕೇಳಿ ನೋಡಿ.

ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಏಜೆಂಟ್ ಎಂದು ಟೀಕಿಸಿದ್ದ ಜಮೀರ್, ಏಜೆಂಟ್ ಆಗಿ ಹಣ ಪಡೆದು, ಆ ಹಣದಲ್ಲೇ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಿದ್ದಾರೆ. ಓರ್ವ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿಯ ದಲ್ಲಾಳಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *