– ಸಂತ್ರಸ್ತೆ ಬಂದು ಹೇಳಿಕೆ ದಾಖಲಿಸಿದ್ರೂ ಆರೋಪಿ ಬಂಧನ ಆಗಿಲ್ಲ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣದ ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನ ದಾಖಲಿಸಿದರು. ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಾದ ಬಳಿಕ ಯುವತಿಯನ್ನ ಧ್ವನಿ ಪರೀಕ್ಷೆಗಾಗಿ ಆಡುಗೋಡಿಯ ಟೆಕ್ನಿಕಲ್ ಸೆಲ್ ಗೆ ಕರೆ ತರಲಾಗಿದೆ. ಈ ವೇಳೆ ಮಾತನಾಡಿದ ಯುವತಿ ಪರ ವಕೀಲ ಜಗದೀಶ್, ಸಂತ್ರಸ್ತೆಯನ್ನ ಎಸ್ಐಟಿಯ ವಶಕ್ಕೆ ನೀಡಿಲ್ಲ. ಧ್ವನಿ ಪರೀಕ್ಷೆ ಬಳಿಕ ನಾಳೆ ಮತ್ತೆ ವಿಚಾರಣೆಗೆ ಕರೆತರಲಾಗುವುದು ಎಂದು ತಿಳಿಸಿದರು.
ಎಸ್ಐಟಿ ಅಧಿಕಾರಿಗಳು ಸೆಕ್ಷನ್ 161 ಪ್ರಕಾರ ಧ್ವನಿ ಪರೀಕ್ಷೆ ಮಾಡಬೇಕೆಂದಾಗ ನಾವೇ ಕಕ್ಷಿದಾರರನ್ನ ಕರೆ ತಂದಿದ್ದೇವೆ. ಪರೀಕ್ಷೆ ಬಳಿಕ ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ನಾವು ಆಕೆಗೆ ನೀಡಿದ ಮಾತನ್ನ ಪೂರ್ಣಗೊಳಿಸಿದ್ದೇವೆ. ಪ್ರಕರಣ ದಾಖಲಾಗಿದ್ದು ಸುಳ್ಳು ಅಂದವರಿಗೆ ಸತ್ಯ ಏನು ಅನ್ನೋದು ಅರ್ಥವಾಗಿದೆ. ಯುವತಿ ಬಂದಾಯ್ತು, ಹೇಳಿಕೆ ದಾಖಲಾಯ್ತು. ಹಾಗಾಗಿ ಸರ್ಕಾರ ಮತ್ತು ಪೊಲೀಸರು ಈ ಕೂಡಲೇ ಆರೋಪಿಯನ್ನ ಬಂಧಿಸಬೇಕೆಂದು ಜಗದೀಶ್ ಆಗ್ರಹಿಸಿದರು.
ಅತ್ಯಾಚಾರ ಪ್ರಕರಣದ ಆರೋಪಿ ಬೆಂಗಳೂರು, ಬೆಳಗಾವಿ ಅಂತ ಓಡಾಡುತ್ತಿರೋದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗ ಆರೋಪಿಯನ್ನ ಬಂಧಿಸಬೇಕಾಗಿದೆ. ಇನ್ನು ಪೊಲೀಸರು ಯುವತಿಗೆ ಸೂಕ್ತ ಭದ್ರತೆ ನೀಡುವದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರು ಯುವತಿಗೆ ನಿರ್ಭೀತಿಯ ವಾತಾವರಣ ನಿರ್ಮಿಸಿದ್ದಾರೆ. ಇಂದು ಯುವತಿಯ ವಿಚಾರಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂತ್ರಸ್ತೆಯನ್ನ ಯಾರೂ ಅಪಹರಿಸಿಲ್ಲ. ಯುವತಿ ವಯಸ್ಕಳಾಗಿದ್ದು, ಪೋಷಕರ ಸಹಾಯವಿಲ್ಲದೇ ತನ್ನ ನಿರ್ಧಾರವನ್ನ ತೆಗೆದುಕೊಳ್ಳುವ ತಿಳುವಳಿಕೆ ಇದೆ. ನ್ಯಾಯಾಲಯ ಸಹ ಯುವತಿಯ ಹೇಳಿಕೆಯನ್ನ ಒಪ್ಪಿಕೊಳ್ಳುತ್ತೇವೆ. ಮೊದಲು ಅತ್ಯಾಚಾರದ ಪ್ರಕರಣ ತನಿಖೆ ನಡೆಯಲಿ. ನಂತ್ರ ಯುವತಿ ಪೋಷಕರು ದಾಖಲಿಸಿದ ದೂರಿನ ತನಿಖೆ ನಡೆಯಲಿ ಎಂದರು.