– ನಮ್ಮ ಮಗಳನ್ನ ಮುಂದಿಟ್ಟು ರಾಜಕಾರಣ
– ಒತ್ತಡದಲ್ಲಿರೋ ಮಗಳಿಗೆ ಕೌನ್ಸಲಿಂಗ್ ನೀಡಬೇಕಿದೆ
– ಇದಕ್ಕೆಲ್ಲಾ ಡಿಕೆಶಿ ನೇರ ಕಾರಣ: ಯುವತಿ ಸೋದರನಿಂದ ಗಂಭೀರ ಆರೋಪ
ಬೆಳಗಾವಿ: ಸಿಡಿ ಯುವತಿ ಪ್ರತ್ಯಕ್ಷ ಆಗುತ್ತಿರುವ ಬೆನ್ನಲ್ಲೇ ಸಂತ್ರಸ್ತೆಯ ಪೋಷಕರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಮಗಳು ಒತ್ತಡದಲ್ಲಿದ್ದು, ಈ ಸಂದರ್ಭದಲ್ಲಿ ಆಕೆಯ ಹೇಳಿಕೆಗಳನ್ನ ಪರಿಗಣಿಸಬಾರದು. ಮಗಳಿಗೆ ಕೌನ್ಸಲಿಂಗ್ ಅಗತ್ಯವಿದೆ. ಕೌನ್ಸಲಿಂಗ್ ನಂತರವೇ ಆಕೆಯ ಹೇಳಿಕೆಯನ್ನ ಪೊಲೀಸರು ಮತ್ತು ನ್ಯಾಯಾಧೀಶರು ದಾಖಲಿಸಿಕೊಳ್ಳಬೇಕು ಎಂದು ಯುವತಿ ತಂದೆ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಮೇಲೆ ಒತ್ತಡವಿಲ್ಲ: ನಮಗೆ ಕಾನೂನು ಗೊತ್ತಿಲ್ಲ. ಆದ್ರೆ ದೇಶದ ಪ್ರಜೆಯಾಗಿ, ಮಗಳಿಗೆ ತೊಂದರೆ ಆಗಿದ್ದಕ್ಕೆ ದೂರು ಸಲ್ಲಿಸುವ ಹಕ್ಕು ನನಗಿದೆ. ನಾವು ಯಾವುದೇ ಒತ್ತಡದಲ್ಲಿಲ್ಲ. ಅವಳು ಯಾವ ಪರಿಸ್ಥಿತಿಯಲ್ಲಿದ್ದಾಳೆ ಎಂಬುವುದು ನಮಗೆ ಗೊತ್ತಾಗುತ್ತಿಲ್ಲ. ಹಾಗಾಗಿ ಮಗಳನ್ನ ನಮ್ಮ ವಶಕ್ಕೆ ನೀಡಬೇಕೆಂದು ಕೇಳಿಕೊಂಡರು. ಇದೇ ವೇಳೆ ಡಿವೈಎಸ್ಪಿ ಕಟ್ಟಮನಿ ನಮಗೆ ಒತ್ತಡ ಹಾಕಿಲ್ಲ. ಎಸ್ಐಟಿ ಮುಂದೆ ಹೇಳಿಕೆ ದಾಖಲಿಸಿ, ಅವರ ಭದ್ರತೆಯಲ್ಲಿಯೇ ಬಂದಿದ್ದೇವೆ ಎಂದು ಹೇಳಿದರು.
ಆಕೆ ನನ್ನ ಮಗಳು, ಮನೆಗೆ ಬರಲಿ: ನಮ್ಮ ಮಗಳನ್ನ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಬಳಿಯಲ್ಲಿರಲು ಇಷ್ಟವಿದ್ರೆ ನಾವು ನಿನ್ನನ್ನು ಕರೆದುಕೊಳ್ಳುತ್ತೇವೆ. ಏನೇ ಆದ್ರೂ ಆಕೆ ನನ್ನ ಮಗಳು. ಆಕೆ ಯಾವುದೇ ಹೇಳಿಕೆ ನೀಡುತ್ತಿಲ್ಲ. ಆಕೆ ಕಡೆಯಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡಲಾಗಿಸುತ್ತಿದೆ. ಈ ಪ್ರಕರಣದಿಂದ ನಮ್ಮ ಮನಸ್ಸಿಗೂ ನೋವಾಗಿದೆ ಎಂದು ಯುವತಿ ತಂದೆ ಭಾವುಕರಾದರು.
ಡಿಕೆಶಿ ನೇರ ಕಾರಣ: ಇದೇ ವೇಳೆ ಮಾತನಾಡಿದ ಯುವತಿ ಸೋದರ, ಡಿ.ಕೆ.ಶಿವಕುಮಾರ್ ಅಣತಿಯಂತೆ ಆಕೆ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನ ರಾಜಕಾರಣದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಲೀಕ್ ಆಗಿರುವ ಆಡಿಯೋ ಕ್ಲಿಪ್ ನಿಜ. ಆದ್ರೆ ಅದು ಹೇಗೆ ಹೊರ ಬಂತು ಎಂಬುವುದರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಸುರಕ್ಷತೆಯಲ್ಲಿದ್ದು, ಪೊಲೀಸರು ಭಧ್ರತೆ ನೀಡಿದ್ದಾರೆ. ಇದಕ್ಕೆಲ್ಲಾ ಡಿ.ಕೆ.ಶಿವಕುಮಾರ್ ನೇರ ಕಾರಣ. ಅವರು ನೀಡಿದ ಹಣದಿಂದಲೇ ಸೋದರಿ ಗೋವಾದತ್ತು ಹೋಗುತ್ತಿರೋದಾಗಿ ಹೇಳಿದ್ದಳು. ಬೇಕಾದ್ರೆ ಆಡಿಯೋ ಕ್ಲಿಪ್ ನಿಮಗೆಲ್ಲರಿಗೂ ಕೇಳಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.