ಆಸಕ್ತಿ ತೋರದ ಬೆಂಗ್ಳೂರು ಮಂದಿ – ಎಲ್ಲಿ ಎಷ್ಟು ಪ್ರಮಾಣದ ಮತದಾನ ನಡೆದಿದೆ?

Public TV
2 Min Read
election voting 2

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠೆಯ ಕಣಗಳಾದ ರಾಜರಾಜೇಶ್ವರಿ ನಗರ ಮತ್ತು ಶಿರಾ ಬೈಎಲೆಕ್ಷನ್ ಅತ್ಯಂತ ಶಾಂತಿಯುತವಾಗಿ ನಡೆದಿದೆ.

ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ, ಜೆಡಿಎಸ್‍ನ ಕೃಷ್ಣಮೂರ್ತಿ ಸೇರಿ 16 ಹುರಿಯಾಳುಗಳ ಭವಿಷ್ಯ ಮತಯಂತ್ರ ಸೇರಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್‍ನ ಜಯಚಂದ್ರ, ಜೆಡಿಎಸ್‍ನ ಅಮ್ಮಾಜಮ್ಮ ಸೇರಿ 15 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

election voting 5

ಏಳು ದಿನಗಳ ಬಳಿಕ ನವೆಂಬರ್ 10ಕ್ಕೆ ಫಲಿತಾಂಶ ಹೊರಬೀಳಲಿದೆ. ರಾಜರಾಜೇಶ್ವರಿ ನಗರ ಪ್ರಚಾರ ಕಣದಲ್ಲಿ ಸಿಡಿದ ಮಾತಿನ ಮತಾಪುಗಳನ್ನು ನೋಡಿದರೆ ಈ ಬಾರಿಯ ಚುನಾವಣೆಯಲಿ ಏನೇನೋ ಆಗಿಬಿಡಬಹುದು ಎಂಬ ಭೀತಿ ಮನೆ ಮಾಡಿತ್ತು. ಆದರೆ ಅದೃಷ್ಟವಶಾತ್ ಅಂಥದ್ದೇನು ನಡೆಯಲಿಲ್ಲ. ಬೆಳಗ್ಗೆ ಏಳು ಗಂಟೆಗೆ ಶುರುವಾದ ಮತದಾನ ಸಂಜೆ ಆರರವರೆಗೂ ನಡೆಯಿತು.

ಬೆಳಗ್ಗೆ ಮತ್ತು ಸಂಜೆ ಮತದಾನ ಪ್ರಕ್ರಿಯೆ ಒಂಚೂರು ಬಿರುಸು ಪಡೆದಿದ್ದು ಬಿಟ್ಟರೆ ಉಳಿದ ಅವಧಿಯಲ್ಲಿ ಮತದಾನ ಅತ್ಯಂತ ನೀರಸವಾಗಿತ್ತು. ಬೇಸರದ ವಿಷ್ಯ ಅಂದ್ರೆ, ಅತ್ಯಂತ ಸುಶಿಕ್ಷಿತ ಮತದಾರರು ಎನಿಸಿಕೊಂಡ ನಗರ ಪ್ರದೇಶದ ಮಂದಿ, ತಮ್ಮ ಹಕ್ಕು ಚಲಾಯಿಸಲು ಉತ್ಸಾಹ ತೋರಲೇ ಇಲ್ಲ.

election voting 3

ಮತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಆರ್ ಆರ್ ನಗರದಲ್ಲಿ ವೋಟಿಂಗ್ ಪ್ರಮಾಣ ಹೆಚ್ಚಲೇ ಇಲ್ಲ. ಯುವಕರಿಗಿಂತ ಹಿರಿಯರೇ ಮತಗಟ್ಟೆಗೆ ಹೆಚ್ಚಾಗಿ ಧಾವಿಸಿದ್ದರು. ಆಕ್ಸಿಡೆಂಟ್ ಆಗಿ ನಡೆಯಲಾಗದವರೂ ಸಹ ಮತ ಚಲಾಯಿಸಲು ಬಂದಿದ್ದರು.

ಶಿರಾದಲ್ಲಿ ಪರಿಸ್ಥಿತಿ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಅಲ್ಲಿನ ಕೊರೋನಾ ನಡ್ವೆಯೂ ಮತದಾರರು ಜೋರು ಉತ್ಸಾಹದಿಂದ ಮತಗಟ್ಟೆಗೆ ಬಂದರು. ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಶೇ.51.3ರಷ್ಟು ಮತದಾನ ಆಗಿದೆ.

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಈ ಬಾರಿ 45.25% ಮತದಾನ ನಡೆದರೆ 2018ರಲ್ಲಿ 52% ರಷ್ಟು ಮತದಾನ ನಡೆದಿತ್ತು. ಶಿರಾದಲ್ಲಿ ಈ ಬಾರಿ 82.31% ರಷ್ಟು ಮತದಾನ ನಡೆದಿದ್ದರೆ 2018 ರಲ್ಲಿ 84.31% ರಷ್ಟು ಮತದಾನ ನಡೆದಿತ್ತು.

election voting 1

ಮತ ಪ್ರಮಾಣ ಇಳಿಕೆಗೆ ಕಾರಣವೇನು?
– ಲಾಕ್‍ಡೌನ್ ವೇಳೆ ಊರಿಗೆ ಹೋದವರು ಸಂಪೂರ್ಣವಾಗಿ ವಾಪಸ್ ಆಗದೇ ಇರುವುದು
– ಕೊರೋನಾ ಸೋಂಕು ಭೀತಿ
– ಮತದಾನ ಮಾಡಲು ನಿರ್ಲಕ್ಷ್ಯ ಧೋರಣೆ
– ಗಾರ್ಮೆಂಟ್ಸ್‌ ಗೆ ರಜೆ ನೀಡದೇ ಇರುವುದು

Share This Article
Leave a Comment

Leave a Reply

Your email address will not be published. Required fields are marked *