– ವನ್ಯಪ್ರಿಯರು ಸ್ವಾಗತ, ಪ್ರವಾಸಿಗರ ವಿರೋಧ
ಚಾಮರಾಜನಗರ: ಸಫಾರಿಗೆ ಹೋಗಿ ಪ್ರಾಣಿಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಇನ್ಮುಂದೆ ಸಫಾರಿಗೆ ತೆರಳುವ ಪ್ರವಾಸಿಗರು ಮೊಬೈಲ್ ಬಳಸದಂತೆ ನಿಷೇಧವೇರಿದೆ. ಇದು ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ವನ್ಯಪ್ರಿಯರು ಅರಣ್ಯ ಇಲಾಖೆ ನಿರ್ಧಾರಕ್ಕೆ ತಲೆ ಬಾಗಿದ್ರೆ,ಪ್ರವಾಸಿಗರು ವಿರೋಧ ವ್ಯಕ್ತಪಡಿಸ್ತಿದ್ದಾರೆ.
ಹೌದು. ಸಫಾರಿ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ, ಕಾಡಿಗೆ ಹೋದ್ರೆ ಸಾಕು ಒಂದು ರೌಂಡ್ ಸಫಾರಿಗೆ ಹೋಗಿಬರಬೇಕು ಅನ್ಸುತ್ತೆ. ವನ್ಯ ಪ್ರಾಣುಗಳಾದ ಹುಲಿ, ಆನೆ ಸೇರಿದಂತೆ ಇತರ ಪ್ರಾಣಿಗಳ ದರ್ಶನ ಮಾಡಿ ಪ್ರಕೃತಿಯ ಸೌಂದರ್ಯ ಸವಿದು ಬರುವ ಮಜಾವೇ ಬೇರೆ. ಅದರಲ್ಲೂ ಮೊದಲ್ಲೆಲ್ಲಾ ಪ್ರವಾಸಿಗರು ಸಫಾರಿಗೆ ತೆರಳುವ ವೇಳೆ ಮೊಬೈಲ್ ಬಳಕೆ ಮಾಡ್ತಿದ್ರು ಪ್ರಾಣಿ ಪೋಟೋ, ವಿಡಿಯೋ ಎಲ್ಲವನ್ನೂ ಸೆರೆಹಿಡಿದು ತರುತ್ತಿದ್ದರು. ಅದನ್ನು ತಮ್ಮ ನೆನಪಿನಾಳದಲ್ಲಿ ಇಟ್ಟುಕೊಳ್ಳುತ್ತಿದ್ರು. ಆದರೆ ಇದೀಗ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ.
ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿಗೆ ಮೊಬೈಲ್ ನಿಷೇಧ ಮಾಡಿ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಯಾರೂ ಕೂಡ ಸಫಾರಿಗೆ ತೆರಳುವ ವೇಳೆ ಮೊಬೈಲ್ ಬಳಸದಂತೆ ಸೂಚನೆ ಕೊಟ್ಟಿದ್ದಾರೆ. ದೇಶದ ಜಿಮ್ ಕಾರ್ಬೆಟ್, ಥಾಡಾ, ಕಡಬ ಸೇರಿದಂತೆ ಬೇರೆಲ್ಲಾ ಕಡೆ ಎನ್ ಟಿಸಿಎ ನಿಯಮದಂತೆ ಮೊಬೈಲ್ ಬಳಕೆಗೆ ನಿಷೇಧವಿದೆ. ಆದ್ದರಿಂದ ನಾವೂ ಕೂಡ ಮೊಬೈಲ್ ಬಳಕೆಗೆ ನಿಷೇಧ ವಿಧಿಸಿದ್ದೇವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಹೇಳಿದ್ದಾರೆ.
ಸಫಾರಿಯಲ್ಲಿ ಮೊಬೈಲ್ ಬಳಕೆ ಮಾಡದಂತೆ ಅರಣ್ಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ವನ್ಯ ಪ್ರಿಯರು ಸ್ವಾಗತ ಕೋರಿದ್ದಾರೆ. ಸಫಾರಿ ವೇಳೆ ಮೊಬೈಲ್ ಬಳಕೆ ಮಾಡೋದ್ರಿಂದ ಕೆಲವು ದುರ್ಘಟನೆಗಳ ಚಿತ್ರೀಕರಣ ಮಾಡಿ ವೈರಲ್ ಮಾಡಲಾಗುತ್ತಿತ್ತು. ಈ ವಿಡಿಯೋ ಆಧರಿಸಿ ಬೇಟೆಗಾರರು ಹುಲಿ ಸೇರಿದಂತೆ ಇತರ ಪ್ರಾಣಿಗಳಿಗೆ ಹೊಂಚು ಹಾಕಿ ಬೇಟೆಯಾಡುತ್ತಿದ್ದರು. ಇದೀಗ ಅರಣ್ಯ ಇಲಾಖೆ ಮೊಬೈಲ್ ಬಳಕೆಗೆ ನಿಷೇಧ ವಿಧಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಸ್ವಾಗತಿಸಿದ್ದಾರೆ.
ಪ್ರವಾಸಿಗರು ಅರಣ್ಯ ಇಲಾಖೆ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾವೂ ಸಫಾರಿ ವೇಳೆ ಪ್ರಾಣಿಗಳಿಗಂತೂ ತೊಂದರೆ ಕೊಡಲ್ಲ. ಆ ಮೊಮೆಂಟಮ್ ನ ಆಗೆ ಮೊಬೈಲ್ ನಲ್ಲಿ ಸೆರೆಹಿಡಿದು ನೆನಪಿಗೆ ಇಟ್ಟುಕೊಳ್ತೇವೆ. ಅರಣ್ಯ ಇಲಾಖೆ ಮೊಬೈಲ್ ಬ್ಯಾನ್ ಮಾಡಿದ್ರಿಂದ ನಮಗೆ ನಿರಾಸೆಯಾಗಿದೆ ಎಂದು ಪ್ರವಾಸಿ ಚೈತನ್ಯ ಹೇಳಿದ್ದಾರೆ.
ಒಟ್ಟಿನಲ್ಲಿ ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಮೊಬೈಲ್ ಬ್ಯಾನ್ ಮಾಡಿರೋದು ಸರಿಯೇ, ಆದರೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿರ್ಧಾರ ತುಂಬಾ ಬೇಸರ ತರಿಸಿದೆ.