ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮುಖಂಡೆ ಮಮತಾಮೂರ್ತಿ ಮಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
19 ವರ್ಷದ ನಿಹಾರಿಕಾ ಮೃತ ಯುವತಿ. ಮಂಗಳವಾರ ತಡರಾತ್ರಿ ಪ್ರಶಾಂತನಗರದ ಮನೆಯಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿ ತಾಯಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ತಂದೆ ವೆಂಕಟೇಶ್ ಮೂರ್ತಿ ಶಿಡ್ಲಘಟ್ಟ ತಾಲೂಕು ಆರೋಗ್ಯಾಧಿಕಾರಿಯಾಗಿದ್ದಾರೆ. ನಿಹಾರಿಕಾ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದ್ದು, ಸಿಇಟಿ ಪರೀಕ್ಷೆ ಬರೆದಿದ್ದಳು.
ತಡರಾತ್ರಿ ಈ ಘಟನೆ ನಡೆದಿದ್ದು, ಬೆಳ್ಳಂಬೆಳಗ್ಗೆ ಮೃತದೇಹವನ್ನ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಯುವತಿ ಹಾಗೂ ತಾಯಿ ನಡುವೆ ತಡರಾತ್ರಿ ಜಗಳ ನಡೆದಿದೆ ಅಂತ ಅಕ್ಕಪಕ್ಕದ ನಿವಾಸಿಗಳು ಹೇಳುತ್ತಿದ್ದಾರೆ. ಹೀಗಾಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಅಥವಾ ಬೇರೆ ಏನಾದರೂ ಆಗಿದೆಯಾ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಪೊಲೀಸರು ಮನೆಗೆ ಬರುವ ಮುನ್ನವೇ ಮೃತದೇಹ ಶಿಫ್ಟ್ ಮಾಡಿರುವ ಪೋಷಕರ ನಡೆ ಅನುಮಾನ ಹುಟ್ಟಿಸಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಪ್ರಶಾಂತ್ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.