ಬೆಳಗಾವಿ: ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಸಿಎ ಯಡಿಯೂರಪ್ಪನವರು ಜಿಲ್ಲೆಗೆ ಬಂದಾಗ ಶಾಸಕ ಉಮೇಶ್ ಕತ್ತಿ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಲ್ಲ. ಉಮೇಶ್ ಕತ್ತಿ ನಮಗೆ ವೈರಿನಾ, ಅವರು ನಮ್ಮವರೇ ಎಂದು ಹೇಳುವ ಮೂಲಕ ನಾವೆಲ್ಲ ಒಂದೇ ಎನ್ನುವ ಸಂದೇಶವನ್ನು ಡಿಸಿಎಂ ಲಕ್ಷ್ಮಣ ಸವದಿ ನೀಡಿದರು.
ಮಾಧ್ಯಮಗಳ ಮೇಲಿನ ನಿರ್ಬಂಧದ ಮೇಲಿನ ಸ್ಪೀಕರ್ ನಿರ್ಧಾರವನ್ನು ನಾನು ಬೆಂಬಲಿಸಲ್ಲ ಮತ್ತು ವಿರೋಧಿಸಲ್ಲ. ಸ್ಪೀಕರ್ ನಿರ್ಧಾರವನ್ನು ನಾವು ಪ್ರಶ್ನೆ ಮಾಡಲ್ಲ. ಹಾಗಾಗಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲಾರೆ. ಮಾಜಿ ಡಿಸಿಎಂ ಪರಮೇಶ್ವರ್ ತಮ್ಮ ನಿವಾಸದ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕೆಲ ಕಾಂಗ್ರೆಸ್ ನಾಯಕರು ತಮ್ಮಲ್ಲಿರುವ ಲೋಪಗಳನ್ನು ಮರೆ ಮಾಡಲು ನಮ್ಮತ್ತ ಬೆರಳು ತೋರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಕಿಡಿಕಾರಿದರು.
ಜೆಡಿಎಸ ವರಿಷ್ಠರಾದ ದೇವೆಗೌಡರು ರಾಜಕೀಯ ಲಾಭ ಪಡೆದುಕೊಳ್ಳಲು ಈ ರೀತಿ ಐಟಿ ದಾಳಿಯನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಐಟಿ ದಾಳಿಗೂ ರಮೇಶ್ ಆತ್ಮಹತ್ಯೆಗೂ ಯಾವುದೇ ಸಂಬಂಧ ಇಲ್ಲ. ಪರಮೇಶ್ವರ್ ಅಥವಾ ರಮೇಶ್ ಕುಟುಂಬಸ್ಥರು ಯಾರಾದರು ಬಂದು ತನಿಖೆ ಮಾಡಿ ಎಂದು ಸರ್ಕಾರಕ್ಕೆ ಕೇಳಿಕೊಂಡರೆ ತನಿಖೆ ನಡೆಸುವುದಾಗಿ ಸವದಿ ಹೇಳಿದ್ದಾರೆ.