ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಹಾಗೂ ಸಂಪುಟ ರಚನೆ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಗುರುವಾರ ರಾತ್ರಿ ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಬಿಜೆಪಿ ವರಿಷ್ಠರೊಂದಿಗೆ ಸಂಪುಟದ ರಚನೆಯ ಕುರಿತು ಮಹತ್ವದ ಚರ್ಚೆ ಕೈಗೊಳ್ಳಲಿರುವ ಸಿಎಂ ಬಿಎಸ್ವೈ ಅವರು, ಶುಕ್ರವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಲು ಪ್ರಧಾನಿಗಳಿಗೆ ಮನವಿ ಮಾಡುತ್ತಾರೆ ಎಂಬ ಮಾಹಿತಿ ಲಭಿಸಿದೆ.
ಪ್ರಧಾನಿಗಳ ಭೇಟಿ ಬಳಿಕ ಕೇಂದ್ರ ರೈಲ್ವೆ ಸಚಿವರು, ವಿಮಾನಯಾನ ಸಚಿವರು ಸೇರಿದಂತೆ ಹಲವು ಕೇಂದ್ರ ಸಚಿವರನ್ನ ಭೇಟಿಯಾಗಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಶನಿವಾರದ ವೇಳೆಗೆ ಸಂಪುಟ ರಚನೆಯ ಫೈನಲ್ ಪಟ್ಟಿ ಸಿದ್ಧ ಪಡಿಸಲಿರುವ ಬಿಎಸ್ವೈ ಅವರು ಸೋಮವಾರದಂದು ಬಹುತೇಕ ಸಂಪುಟ ರಚನೆ ಮಾಡುವ ನಿರೀಕ್ಷೆ ಇದೆ.