ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಅವರು ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿವಲಿಂಗಕ್ಕೆ ಬಿಜೆಪಿ ಶಾಲನ್ನು ಹೊದೆಸಿ, ದೇವರ ಮುಂದೆ ಸಂಸದರ ಸಾಧನೆ ಕೈಪಿಡಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಸದ್ಯ ಕಾಂಗ್ರೆಸ್ ನಾಯಕರು ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಸಿದ್ದಲಿಂಗಪುರ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯಕ್ಕೆ ಪ್ರತಾಪ್ ಸಿಂಹ ಅವರು ಇಂದು ಭೇಟಿ ನೀಡಿದ್ದರು. ಈ ವೇಳೆ ಶಿವಲಿಂಗದ ನಾಗರ ಹೆಡೆಗೆ ಬಿಜೆಪಿ ಶಾಲು ಧಾರಣೆ ಮಾಡಿಸಿ, ಶಿವಲಿಂಗದ ಮೇಲೆ ಸಂಸದರ ಸಾಧನೆ ಕೈಪಿಡಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು, ಪ್ರತಾಪ್ ಸಿಂಹ ವಿರುದ್ಧ ಧಾರ್ಮಿಕ ಭಾವನೆಗಳ ದುರ್ಬಳಕೆಯ ಆರೋಪ ಮಾಡುತ್ತಿದ್ದಾರೆ.
ಪ್ರತಾಪ್ ಸಿಂಹ ಅವರು ದೇವಸ್ಥಾನದಲ್ಲೂ ರಾಜಕೀಯ ಮಾಡಿದ್ದಾರೆ. ದೇವರಿಗೆ ಬಿಜೆಪಿ ಶಾಲು ಹೊದೆಸಿ ಧಾರ್ಮಿಕ ಭಾವನೆಯ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಕಾಂಗ್ರೆಸ್ ಕಿಡಿಕಾರಿದೆ. ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲು ಕೈ ಪಡೆ ಮುಂದಾಗಿದೆ.