ಮೈಸೂರು: ಸಮಾಜ ಏಳಿಗೆಗಾಗಿ ಶ್ರಮಿಸಿದ ಹಾಲುಮತದ ಸಮಾಜದ ನಾಯಕರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪ್ರಕೃತಿ ತನ್ನ ಮುನಿಸು ಪ್ರದರ್ಶಿಸಿದೆ ಎಂದು ಮೈಸೂರಿನಲ್ಲಿ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯವಾಗಿದೆ ಎಂದು ಪ್ರತಿಪಾದಿಸಿದರು.
ಮೈಸೂರಿನಲ್ಲಿ ಕನಕ ಭವನ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿ, ಕನಕದಾಸರ ವಿಷಯ ಪ್ರಸ್ತಾಪ ಮಾಡುತ್ತಾ ಹಾಲುಮತ ಸಮಾಜದ ನಾಯಕರು ಸಮಾಜದ ಅಭಿವೃದ್ಧಿ, ಏಳಿಗೆಗಾಗಿ ದುಡಿದರು. ಅವರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪ್ರಕೃತಿ ಮುನಿಸಿಕೊಂಡು ತನ್ನ ಅರ್ಭಟ ಪ್ರದರ್ಶಿಸಿದೆ. ಅದೇ ಈ ರಾಜ್ಯದ ಏಳಿಗೆಗಾಗಿ ದುಡಿದ ಒಬ್ಬ ನಾಯಕನನ್ನು ಜನರು ಹೀನಾಯವಾಗಿ ಸೋಲಿಸಿದ ಕಾರಣ ಕೊಡಗಿನಲ್ಲಿ ಜಲಪ್ರಳಯವಾಗಿದೆ ಅಂದ್ರು.
ಈ ವಿಷಯವನ್ನು ಆ ದಿನಗಳಲ್ಲೇ ನಾನು ಬಹಿರಂಗ ಮಾಡಬೇಕೆಂದುಕೊಂಡಿದ್ದೆ. ಆದ್ರೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಇಂದು ಈ ವೇದಿಕೆಯಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಸೇರಿ ನಮ್ಮ ಸಮಾಜದ ಯಾವುದೇ ನಾಯಕರ ಬಗ್ಗೆ ಹೀನಾಯವಾಗಿ ಮಾತನಾಡಬಾರದು ಎಂದು ಸ್ವಾಮೀಜಿಗಳು ವೇದಿಕೆ ಮೂಲಕ ಸಿದ್ದರಾಮಯ್ಯ ವಿರೋಧಿಗಳಿಗೆ ಸಂದೇಶ ರವಾನಿಸಿದರು.
ಸಿದ್ದರಾಮಯ್ಯರ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯರ ಕೈಯಲ್ಲಿದೆ. ಅವರು ಮನಸ್ಸು ಮಾಡಿದರೆ ಏನು ಬೇಕಾದರು ಮಾಡಬಹುದು. ರಾಜಕೀಯ ಏನಾದರು ಆಗಲಿ. ನನ್ನ ಸಮುದಾಯದ ಯಾವುದೇ ನಾಯಕರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ರಾಜಕೀಯದಲ್ಲಿ ಸಾಕಷ್ಟು ನಾಯಕರು ಹುಟ್ಟುತ್ತಾರೆ, ಮರಿನಾಯಕರು ಹುಟ್ಟುತ್ತಾರೆ. ಆದರೆ ಸಿದ್ದರಾಮಯ್ಯರಂತ ನಾಯಕರು ಹುಟ್ಟುವುದಿಲ್ಲ ಎಂದು ಹಾಡಿ ಹೊಗಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv