ಮೈಸೂರು: ಇಲ್ಲಿನ ಕುವೆಂಪುನಗರದಿಂದ ಗೃಹಿಣಿ ಮತ್ತು ಆಕೆಯ ಪುತ್ರಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿದ್ದ ಗೃಹಿಣಿ ಸ್ಫೂರ್ತಿ ಮತ್ತು ಆಕೆಯ ಪುತ್ರಿ ಹೇಮಾನಿ ಶವ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಸಿಕ್ಕಿದೆ.
ಸ್ಫೂರ್ತಿಯ ಪತಿ ಯೋಗಾನಂದ್, ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿ ಕುಕ್ಕರಹಳ್ಳಿ ಕೆರೆಗೆ ಎಸೆದು ಪತ್ನಿ, ಮಗಳು ನಾಪತ್ತೆಯಾಗಿದ್ದಾರೆ ಎಂದು ನಾಟಕವಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಯೋಗಾನಂದ್ ಇವತ್ತಿನಿಂದ ಒಂದು ತಿಂಗಳ ಪ್ರವಾಸಕ್ಕಾಗಿ ದುಬೈಗೆ ಹೋಗಲು ಸಿದ್ಧನಾಗಿದ್ದ. ಟಿಕೆಟ್ ಕೂಡ ಬುಕ್ ಆಗಿತ್ತು. ಪತ್ನಿ ಮತ್ತು ಮಗಳ ಶವ ಸಿಗುವ ಮುನ್ನವೇ ವಿದೇಶಕ್ಕೆ ಹೋಗುವುದು ಯೋಗಾನಂದ್ ಉದ್ದೇಶವಾಗಿತ್ತು ಎಂದು ಸ್ಫೂರ್ತಿ ಪೋಷಕರು ಆರೋಪಿಸಿದ್ದಾರೆ.
ಯೋಗಾನಂದ್ಗೆ ತನ್ನ ಕಚೇರಿಯಲ್ಲಿನ ಯುವತಿ ಜೊತೆ ಅಕ್ರಮ ಸಂಬಂಧ ಇತ್ತು. ಈ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಯೋಗಾನಂದ್ ಮತ್ತು ಸ್ಫೂರ್ತಿ ಇಬ್ಬರಿಗೂ ಇದು ಎರಡನೇ ಮದುವೆ. ಮೃತ ಹೇಮಾನಿ, ಸ್ಫೂರ್ತಿಯ ಮೊದಲ ದಾಂಪತ್ಯದ ಕೂಸು.
ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.