ಮಂಗಳೂರು: ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮಂಗಳೂರಿನಲ್ಲಿ (Mangaluru) ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ವಾಹನ ದುರ್ಬಳಕೆಯಾಗಿರುವ ಆರೋಪ ಕೇಳಿ ಬಂದಿತ್ತು. ಹೆದ್ದಾರಿ ಬಂದ್ ವೇಳೆ ಕೆಲವು ಪ್ರತಿಭಟನಾಕಾರರನ್ನು ಎಸಿಪಿ ವಾಹನದಲ್ಲೇ ಕರೆದೊಯ್ದ ವೀಡಿಯೋ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲ್ಲೇ ಅಪಘಾತಗೊಂಡ ಬಾಲಕನನ್ನು ಎಸಿಪಿ ಕಾರಿನಲ್ಲಿ ಸಾಗಿಸಲಾಗಿತ್ತುಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ನಡೆದಿದ್ದು ಏನು? ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇದ್ದ ಮೈದಾನದಿಂದ ಹೊರ ಬಂದ ಪ್ರತಿಭಟನಾಕಾರರು ಹೆದ್ದಾರಿಯಲ್ಲೇ ನಿಂತಿದ್ದರು. ಹೆದ್ದಾರಿ ಬಂದ್ ಮಾಡೋ ಪ್ಲಾನ್ ಪೊಲೀಸರು ಮೊದಲೇ ಮಾಡಿದ್ದರೂ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಹೆದ್ದಾರಿ ಬಂದ್ ಮಾಡದೆ ವಾಹನ ಸಂಚಾರಕ್ಕೆ ಮುಕ್ತವಾಗಿಸಿದ್ದರು. ಆದರೆ ಮೈದಾನದಲ್ಲಿರಬೇಕಾದ ಪ್ರತಿಭಟನಾಕಾರರು ಹೆದ್ದಾರಿಗೆ ಬಂದು ನಿಂತು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೆಲ ಗಂಟೆಗಳ ಕಾಲ ಕಿ.ಮೀ ದೂರದವರೆಗೆ ವಾಹನಗಳು ನಿಂತಿದ್ದವು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್ ದುಬೆ
ಈ ನಡುವೆ ಕಾರ್ಯಕ್ರಮ ಮುಗಿದ ಬಳಿಕ ಕೆಲ ಪ್ರತಿಭಟನಾಕಾರರನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದರು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಅವರ ಸರ್ಕಾರಿ ಕಾರಿನಲ್ಲಿ ಕೆಲ ಪ್ರತಿಭಟನಾಕಾರರನ್ನು ಕರೆದೊಯ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಪ. ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ – ಕೇಂದ್ರಕ್ಕೆ ನಟ ಮಿಥುನ್ ಚಕ್ರವರ್ತಿ ಆಗ್ರಹ
ಪೊಲೀಸರು ಹೇಳೋದು ಏನು?
ನಗರ ಪೊಲೀಸ್ ಆಯುಕ್ತರು ಈ ಘಟನೆಗೆ ಸ್ಪಷ್ಟನೆ ನೀಡಿದ್ದು ಇದು ಪ್ರತಿಭಟನಾಕಾರರನ್ನು ಸಾಗಿಸಿದ್ದು ಅಲ್ಲ. ಈ ಸಂದರ್ಭದಲ್ಲಿ ಟೆಂಪೋ ಟ್ರಾವೆಲ್ಲರ್ ಬಾಲಕನಿಗೆ ಗುದ್ದಿತ್ತು. ಬಾಲಕನ ಕಾಲಿನ ಮೇಲೆ ಚಕ್ರ ಹರಿದು ಹೋಗಿತ್ತು. ಬಾಲಕನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಎಸಿಪಿ ಅವರ ಕಾರಿನಲ್ಲಿ ಸಾಗಿಸಿದ್ದಾರೆ. ಆ ವೇಳೆ ಗಾಯಾಳುವಿನ ಜೊತೆ ಇತರರು ಇದ್ದರು ಎಂದು ಸ್ಪಷ್ಟೀಕರಣ ನೀಡಿದ್ದಾರೆ.