ನವದೆಹಲಿ: ಮದ್ಯ ನೀತಿ ಹಗರಣದ ಕುರಿತು ಲೆಕ್ಕಪರಿಶೋಧಕರ ವರದಿಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಜೊತೆಗೆ ಗದ್ದಲದ ವೇಳೆ ಮಾಜಿ ಮುಖ್ಯಮಂತ್ರಿ ಅತಿಶಿ (ಈಗ ವಿರೋಧ ಪಕ್ಷದ ನಾಯಕಿ) ಸೇರಿದಂತೆ 15 ಮಂದಿ ಎಎಪಿ ಶಾಸಕರನ್ನು ದೆಹಲಿ ವಿಧಾನಸಭೆಯಿಂದ ಮಂಗಳವಾರ ಅಮಾನತುಗೊಳಿಸಲಾಗಿದೆ.
ಫೆ.5 ರ ಚುನಾವಣೆಯಲ್ಲಿ ಸೋಲನ್ನು ತಪ್ಪಿಸಿಕೊಂಡ ಕೆಲವೇ ಕೆಲವು ಉನ್ನತ ವ್ಯಕ್ತಿಗಳಲ್ಲಿ ಒಬ್ಬರಾದ ಹಿರಿಯ ಎಎಪಿ ನಾಯಕ ಗೋಪಾಲ್ ರೈ ಅವರನ್ನು ಸಹ ವಿಧಾನಸಭೆಯಿಂದ ಅಮಾನತು ಮಾಡಲಾಯಿತು. ಇದನ್ನೂ ಓದಿ: AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ
ವಿಧಾನಸಭೆಯನ್ನುದ್ದೇಶಿಸಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಆರಂಭಿಕ ಭಾಷಣದ ವೇಳೆ ಗದ್ದಲ ಪ್ರಾರಂಭವಾಯಿತು. ನೂತನ ಸಿಎಂ ರೇಖಾ ಗುಪ್ತಾ ಅವರ ಕಚೇರಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ಸಿಂಗ್ ಅವರ ಛಾಯಾಚಿತ್ರಗಳನ್ನು ತೆಗೆದುಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಎಎಪಿ ಶಾಸಕರು ‘ಜೈ ಭೀಮ್’ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ಮತ್ತು ಭಗತ್ಸಿಂಗ್ ಅವರ ಛಾಯಾಚಿತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಈ ಛಾಯಾಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳೊಂದಿಗೆ ಬದಲಾಯಿಸಲಾಗಿದೆ ಎಂದು ಎಎಪಿ ಆರೋಪಿಸಿದೆ.
ಸಿಎಂ ರೇಖಾ ಗುಪ್ತ ಅವರು ಇಂದು ಕಂಟ್ರೋಲರ್ ಮತ್ತು ಆಡಿಟರ್-ಜನರಲ್ (ಸಿಎಜಿ) ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಎಎಪಿ ಅವಧಿಯಲ್ಲಿ ಹಲವು ಭ್ರಷ್ಟಾಚಾರಗಳು ನಡೆದಿವೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: Maha Kumbh Mela: ಮಹಾಶಿವರಾತ್ರಿಯಂದು ಕಡೆಯ ಅಮೃತಸ್ನಾನಕ್ಕೆ ಜಿಲ್ಲಾಡಳಿತ ಸಜ್ಜು
ಈ ಹೇಳಿಕೆಯನ್ನು ಬಿಜೆಪಿ ತಳ್ಳಿಹಾಕಿದ್ದು, ಎಎಪಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ಬಿಡುಗಡೆ ಮಾಡಿದ ಗುಪ್ತಾ ಅವರ ಕಚೇರಿಯ ವೀಡಿಯೊಗಳು, ಎಎಪಿ ಆಡಳಿತದಲ್ಲಿ ಮುಖ್ಯಮಂತ್ರಿಗಳ ಮೇಜಿನ ಹಿಂದೆ ನೇತುಹಾಕಲಾಗಿದ್ದ ಡಾ. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳನ್ನು ಪಕ್ಕದ ಗೋಡೆಗಳಿಗೆ ಸ್ಥಳಾಂತರಿಸಿ, ಮಹಾತ್ಮ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಯವರ ಫೋಟೋಗಳನ್ನು ಅಳವಡಿಸಿರುವುದನ್ನು ತೋರಿಸಿವೆ.
ಎಎಪಿ, ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಈ ಆರೋಪಗಳನ್ನು ಎದುರಿಸಿದ್ದಾರೆ. ಹಲವು ಹಗರಣಗಳ ಆರೋಪಗಳ ಮಧ್ಯೆ ನಡೆದ ಚುನಾವಣೆಯಲ್ಲಿ ಎಎಪಿ ಸೋತಿತು. ಬಿಜೆಪಿ ದೆಹಲಿಯ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡಿತು. ಕಳೆದ ಎರಡು ಚುನಾವಣೆಗಳಲ್ಲಿ ಗೆದ್ದಿದ್ದಕ್ಕಿಂತ 37 ಹೆಚ್ಚು ಸ್ಥಾನಗಳನ್ನು ಗೆದ್ದಿದೆ.