ನವದೆಹಲಿ: ರಾಹುಲ್ ಗಾಂಧಿಯವರು (Rahul Gandhi) ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಮತ್ತು ಅಸತ್ಯ ಎಂದು ಕರೆದಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಆರೋಪಿಸಿದ್ದಾರೆ.
ಸಂಸತ್ನ ಲೈಬ್ರರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಇಡೀ ಹಿಂದೂ ಸಮಾಜವನ್ನು ಅವಮಾನಿಸಿದ್ದಾರೆ. ಇದು ಇದೇ ಮೊದಲಲ್ಲ, ಇದು ಕಾಂಗ್ರೆಸ್ನ ಹಳೆಯ ಚಾಳಿಯಾಗಿದೆ. 2010ರಲ್ಲಿ ಅಂದಿನ ಗೃಹ ಸಚಿವ ಪಿ.ಚಿದಂಬರಂ ಅವರು ಕೂಡ ಹಿಂದೂಗಳನ್ನು ಭಯೋತ್ಪಾದಕರು ಎಂದು ಕರೆದಿದ್ದರು. ಈಗ ಹಿಂದೂಗಳನ್ನು ಹಿಂಸಾತ್ಮಕ ಮತ್ತು ಸುಳ್ಳುಗಾರರು ಎಂದು ಕರೆಯುವ ಮೂಲಕ ರಾಹುಲ್ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ತಗ್ಗಿಸಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮಾನನಷ್ಟ ಕೇಸ್- ಹೋರಾಟಗಾರ್ತಿ ಮೇಧಾ ಪಾಟ್ಕರ್ಗೆ 5 ತಿಂಗಳು ಜೈಲು
ಸಂಸತ್ತಿನ ಚರ್ಚೆಯ ಸಮಯದಲ್ಲಿ ದೇವರ ಚಿತ್ರಗಳನ್ನು ತೋರಿಸಿ ರಾಜಕೀಯವನ್ನು ಸೇರಿಸುವುದು ವಿರೋಧ ಪಕ್ಷದ ನಾಯಕನಿಗೆ ಯಾವುದೇ ರೀತಿಯಲ್ಲಿ ಸರಿಹೊಂದುವುದಿಲ್ಲ. ಪ್ರತಿಪಕ್ಷ ನಾಯಕನ ಸ್ಥಾನವು ಅತ್ಯಂತ ಜವಾಬ್ದಾರಿಯುತ ಸ್ಥಾನವಾಗಿದೆ. ಮೊದಲ ಬಾರಿಗೆ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಆದರೆ ಅವರು ಮೊದಲ ಬಾರಿಗೆ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಹುತಾತ್ಮ ಸೈನಿಕರಿಗೆ ಪರಿಹಾರ ನೀಡುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ. ಒಂದು ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಸೈನ್ಯದ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುವುದಿಲ್ಲ. ಯಾವಾಗಲೂ ಸೇನೆಯ ಮೇಲೆ ಇಂತಹ ಪ್ರಶ್ನೆಗಳನ್ನು ಎತ್ತುತ್ತದೆ ಮತ್ತು ದೇಶವನ್ನು ದಾರಿ ತಪ್ಪಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿ ಸಂಸದ ಸುಧಾಂಶು ತ್ರಿವೇದಿ (Sudhanshu Trivedi) ಮಾತನಾಡಿ, 2013ರ ಜನವರಿ 20ರಂದು ಅಂದಿನ ಲೋಕಸಭೆಯ ಸಭಾನಾಯಕ ಸುಶೀಲ್ ಕುಮಾರ್ ಶಿಂಧೆಯವರು, ಜೈಪುರದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ನಿಂದ ಹಿಂಸಾತ್ಮಕ ಚಟುವಟಿಕೆಗಳು ಮತ್ತು ತರಬೇತಿ ಶಿಬಿರಗಳು ನಡೆಯುತ್ತಿವೆ ಎಂದಿದ್ದರು. ಸದನದಲ್ಲಿ ಈ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ಅವರು ವಿಷಾದ ವ್ಯಕ್ತಪಡಿಸಿದ್ದರು. ರಾಹುಲ್ ಅವರು ಸುಶೀಲ್ ಕುಮಾರ್ ಶಿಂಧೆಯವರಿಂದ ಪಾಠವನ್ನು ಕಲಿಯಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ Vs ನರೇಂದ್ರ ಮೋದಿ – ಲೋಕಸಭೆಯಲ್ಲಿ ಗದ್ದಲಕ್ಕೆ ಕಾರಣವಾಯ್ತು ‘ಹಿಂದೂ’ ಹೇಳಿಕೆ