ಉಡುಪಿ: ಅಸ್ಸಾಂ ಯುವಕನೊಬ್ಬನಿಗೆ ಉಡುಪಿಯಲ್ಲಿ ದೆವ್ವದ ಆವೇಶ ಆಗಿದೆ. ಜೊತೆಯಲ್ಲಿದ್ದ ಕಾರ್ಮಿಕರ ತಂಡ ಎದ್ನೋ ಬಿದ್ನೋ ಅಂತ ಓಡಿ ಹೋಗಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಈ ವಿಡಿಯೋ ವೈರಲ್ ಆಗಿದೆ. ಉಡುಪಿ ಜಿಲ್ಲೆ ಕಾಪುವಿನ ಉದ್ಯಾವರ ಪಿತ್ರೋಡಿಯಲ್ಲಿ ನಿಜಕ್ಕೂ ದೆವ್ವ ಕಾಣಿಸಿಕೊಂಡಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ.
ಫಿಶ್ ಕಟ್ಟಿಂಗ್ ಯೂನಿಟ್ ನ ಆಸು ಪಾಸಿನಲ್ಲಿ ಯುವಕ ಭಯಾನಕ ದೃಶ್ಯ ನೋಡಿದ್ದಾನೆ. ಅದನ್ನು ಕಂಡು ಸ್ಥಳದಲ್ಲಿದ್ದ ಯುವಕರು ಓಡಿದ್ದಾರೆ ಎಂಬುದು ಮತ್ತೊಂದು ಮಾಹಿತಿ. ಕೊಠಡಿಯಲ್ಲಿದ್ದ ಎಲ್ಲಾ ಕಾರ್ಮಿಕರು ದೆವ್ವ ಇದೆಯೆಂದು ಆತಂಕಪಟ್ಟಿದ್ದಾರೆ. ಅಸ್ಸಾಂ ಬಿಹಾರ ಪಶ್ಚಿಮ ಬಂಗಾಳದ ಕಾರ್ಮಿಕರು ಭಯ ಬಿದ್ದು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಿತ್ರೋಡಿ ಉದ್ಯಾವರದ ಸ್ಥಳೀಯರು ಕೊಡುವ ಮಾಹಿತಿ ಪ್ರಕಾರ, ಫಿಶ್ ಕಟ್ಟಿಂಗ್ ಯೂನಿಟ್ ಹಿಂಭಾಗದಲ್ಲಿ ಮಾರಿಗುಡಿ ಕಲ್ಲು ಇದೆ. ಅಲ್ಲಿ ಪ್ರತಿವರ್ಷ ಕೋಳಿ ಬಲಿ ನಡೆಯುತ್ತದೆ. ಕಾರ್ಮಿಕರು ಅಲ್ಲಿ ಸ್ವಚ್ಛತೆಯನ್ನ ಕಾಪಾಡುವುದಿಲ್ಲ ಎಂಬುದಾಗಿ ಕೇಳಿಬಂದಿದೆ. ಇದನ್ನೂ ಓದಿ: ಎಂಪಿ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ – ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ನಾಯಕರ ಒತ್ತಾಯ
ಎರಡು ದಿನದ ಹಿಂದಿನ ಸಿಸಿಟಿವಿ ದೃಶ್ಯಗಳು ಇದಾಗಿದ್ದು, ಸೋಮವಾರ ಅಸ್ಸಾಂ ಬಿಹಾರ ಯುವಕರು ದೆವ್ವದ ಭಯ ಎಂದು ಕಂಪೆನಿಯನ್ನು ಬಿಟ್ಟು ಹೋಗಿದ್ದಾರೆ. ಆದರೆ ಎಸ್ ಎಸ್ ಫಿಶ್ ಕಟಿಂಗ್ ಯೂನಿಟ್ ನಲ್ಲಿ (Fish Cutting Unit) ಕೆಲಸ ಮಾಡುವ ಹಿರಿಯ ಕಾರ್ಮಿಕರು ಇದೆಲ್ಲಾ ದೊಡ್ಡ ನಾಟಕ ಎಂದಿದ್ದಾರೆ. ನಾವು ರಾತ್ರಿ ಹಗಲು ಇಲ್ಲೇ ಮನೆ ಮಾಡಿಕೊಂಡಿದ್ದೇವೆ. ಘಟನೆ ನಡೆದ ದಿನ ನಾನು ಸೈಟ್ ನಲ್ಲೆ ಇದ್ದೆ. ಕೆಲಸ ಬಿಟ್ಟು ಹೋಗಲು ದೆವ್ವ ಪಿಶಾಚಿ ಭೂತ ಎಂಬ ನಾಟಕಗಳನ್ನಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಬಿಹಾರ (Bihar) ಮೂಲದ ಯುವಕನಿಗೆ ಹಿಂದಿನಿಂದಲೂ ಆವೇಶ ಬರುತ್ತಿತ್ತು. ಆತನ ಚಿಕಿತ್ಸೆಗೆ ಜೊತೆಗಿರುವ ಗೆಳೆಯರು ಬಾಬಾ, ಮುಲ್ಲಾಗಳನ್ನು ಕರೆಸಿದ್ದರು ಎಂಬ ಮಾಹಿತಿಯೂ ಇದೆ. ಒಟ್ಟಿನಲ್ಲಿ ಸ್ಥಳೀಯ ಗ್ರಾಮಸ್ಥರು ಸುತ್ತಮುತ್ತ ದೆವ್ವ ಇದೆ ಎಂಬೂದನ್ನು ತಳ್ಳಿಹಾಕಿದ್ದಾರೆ. ಕಾರ್ಮಿಕರ ಕಟ್ಟುಕಥೆ ಎಂದಿದ್ದಾರೆ.