ತಮ್ಮ ನಿರ್ಮಾಣದ ‘ಸಮುದ್ರಂ’ (Samudram) ಸಿನಿಮಾದ ಹಾರ್ಡ್ ಡಿಸ್ಕ್ ನೀಡಿಲ್ಲವೆಂದು ಮತ್ತು ಹಾಡ್ಸ್ ಡಿಸ್ಕ್ ಕೊಡುವಂತೆ ಕೇಳಿದರೆ ಚಿತ್ರದ ಸಿನಿಮಾಟೋಗ್ರಾಫರ್ ರಿಶಿಕೇಷ್ (Rishikesh) ಎನ್ನುವವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಸಿನಿಮಾದ ನಾಯಕಿ ಮತ್ತು ಚಿತ್ರಕ್ಕೆ ಸಹಯೋಗ ನೀಡಿರುವ ಅನಿತಾ ಭಟ್ (Anita Bhatt) ಪ್ರತಿಕ್ರಿಯೆ ನೀಡಿದ್ದಾರೆ.
‘ಈ ಸಿನಿಮಾ ಶುರು ಮಾಡಿದ್ದು ನಾವೇ. ನಾನೇ ಈ ಸಿನಿಮಾವನ್ನು ಮೊದಲು ನಿರ್ಮಾಣ ಮಾಡಿದ್ದು. ಆನಂತರ ಹಣಕಾಸಿನ ತೊಂದರೆ ಆದ ಕಾರಣಕ್ಕಾಗಿ ನಿರ್ದೇಶಕ ರಾಘವ ಮಹರ್ಷಿ ಅವರು ರಾಜಲಕ್ಷ್ಮಿ ಅವರನ್ನು ಕರೆತಂದರು. ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆದರೆ, ರಾಜಲಕ್ಷ್ಮಿ (Rajalakshmi) ನಿರ್ಮಾಪಕರು ತಾವೊಬ್ಬರೇ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದರು. ಅದಕ್ಕೂ ಒಪ್ಪಿ, ನಾವು ಈವರೆಗೂ ಮಾಡಿರುವ ಖರ್ಚನ್ನು ಕೊಡುವಂತೆ ಕೇಳಿದಾಗ ಒಪ್ಪಿಕೊಂಡರು. ಈವರೆಗೂ ಅವರು ಹಣ ಕೊಟ್ಟಿಲ್ಲ’ ಎನ್ನುತ್ತಾರೆ ಅನಿತಾ ಭಟ್.
ಮುಂದುವರೆದು ಮಾತನಾಡಿದ ಅನಿತಾ, ‘ಟೆಕ್ನಿಷನ್ ಗೆ ಕೊಡಬೇಕಾದ ಹಣ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ. ಸಿನಿಮಾಟೋಗ್ರಾಫರ್ ರಿಶಿಕೇಷ ಅವರಿಗೂ ದುಡ್ಡು ಕೊಡಬೇಕು. ಹಾಗಾಗಿ ಇಬ್ಬರ ಮಧ್ಯ ಮನಸ್ತಾಪವಾಗಿದೆ. ಈ ದೂರು ಕೊಡುವುದು ಇವತ್ತಿನದ್ದೇನೂ ಅಲ್ಲ. ಈ ಹಿಂದೆ ಎರಡ್ಮೂರು ಬಾರಿ ಹೀಗೆ ಮಾಡಿ ತೊಂದರೆ ಕೊಟ್ಟಿದ್ದಾರೆ. ಇದರಲ್ಲಿ ರಿಶಿಕೇಷ್ ಅವರದ್ದು ಯಾವುದೇ ತಪ್ಪಿಲ್ಲ’ ಅಂತಾರೆ ಅನಿತಾ ಭಟ್.
‘ರಾಜಲಕ್ಷ್ಮಿ ಅವರ ವಿರುದ್ಧ ನಾವೂ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೆವು. ಸಿನಿಮಾ ರಿಲೀಸ್ ಆದ ನಂತರ ಹಣ ಕೊಡುವುದಾಗಿ ಅವರು ಹೇಳಿದರು. ಆದರೆ, ಈಗ ಅವರ ವರ್ತನೆಯೇ ಬೇರೆಯಾಗಿದೆ. ಆ ಸಿನಿಮಾಗಾಗಿ ಈಗಲೂ ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ಕೊಡಬೇಕಾದ ಹಣವನ್ನು ಕೊಡಬೇಕು’ ಎನ್ನುವುದು ಅನಿತಾ ಭಟ್ ಮಾತು.
‘ಸಿನಿಮಾಗಳಿಗೆ ಸುಪ್ರೀಂ ಅಂದರೆ ಅದು ನಿರ್ದೇಶಕರು. ಸಿನಿಮಾಟೋಗ್ರಾಫರ್ ಹೇಗೆ ಹಾರ್ಡ್ ಡಿಸ್ಕ್ ಇಟ್ಟುಕೊಳ್ಳಲು ಸಾಧ್ಯ? ಹಣಕಾಸಿನ ವಿಷಯದಲ್ಲಿ ಮನಸ್ತಾಪ ಆಗಿರುವುದು ನಿಜ. ಅದನ್ನು ಹೇಳದೇ ಸುಖಾಸುಮ್ಮನೆ ಯಾರಿಗೂ ತೊಂದರೆ ಕೊಡಬಾರದು. ಆ ಸಿನಿಮಾದಲ್ಲಿ ನಾನ ನಟಿಸಿದ್ದೇನೆ. ನಿರ್ಮಾಪಕಿಯೂ ಆಗಿದ್ದೇನೆ. ಆ ಸಿನಿಮಾದ ಬಿಡುಗಡೆಗೆ ಬೇಕಾದ ಎಲ್ಲ ಸಹಾಯವನ್ನು ಈಗಲೂ ನಾನು ಮಾಡಲು ಸಿದ್ದಳಿದ್ದೇನೆ. ಆದರೆ, ತಂಡವನ್ನು ಒಡೆಯುವುದು ಸರಿಯಾದದ್ದು ಅಲ್ಲ’ ಅಂತಾರೆ ಅನಿತಾ ಭಟ್.ಇದನ್ನೂ ಓದಿ:ವಿಜಯ್ ದೇವರಕೊಂಡ ಬಳಿ ‘ಸಮಂತಾ ಎಲ್ಲಿ’ ಎಂದು ಪ್ರಶ್ನಿಸಿದ ನಾಗಾರ್ಜುನ
ಏನಿದು ವಿವಾದ?
ಅನಿತಾ ಭಟ್ ಮತ್ತು ಶಿವಧ್ವಜ ಕಾಂಬಿನೇಷನ್ ‘ಸಮುದ್ರಂ’ ಸಿನಿಮಾದ ಸಿನಿಮಾಟೋಗ್ರಾಫರ್ ರಿಶಿಕೇಷ್ ವಿರುದ್ಧ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿನಿಮಾಟೋಗ್ರಫರ್ ರಿಶಿಕೇಷ್ ಸಮುದ್ರಂ ಚಿತ್ರದ ಹಾರ್ಡ್ ಡಿಸ್ಕ್ ಕೊಡದೆ ನಿರ್ಮಾಪಕರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಚಿತ್ರತಂಡ ದೂರು ನೀಡಿದೆ.
ರಾಜಲಕ್ಷ್ಮಿ ಸಿನಿ ಕ್ರಿಯೇಷನ್ ನಿರ್ಮಾಣ ಮತ್ತು ಅನಿತಾ ಭಟ್ ಕ್ರಿಯೇಷನ್ ಹಾಗೂ ಡಾಟ್ ಟಾಕೀಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಸಂಗೀತ, ಡಬ್ಬಿಂಗ್, ರೀ ರೆಕಾರ್ಡಿಂಗ್, ಎಡಿಟಿಂಗ್ ಸೇರಿ ಡಿಐ ಜವಾಬ್ದಾರಿಯನ್ನು ರಿಶಿಕೇಷ್ ವಹಿಸಿಕೊಂಡಿದ್ದರಂತೆ. ಇದಕ್ಕೆ ಹಂತಹಂತವಾಗಿ 19 ಲಕ್ಷ ಹಣವನ್ನೂ ನಿರ್ಮಾಪಕರಿಂದ ಪಡೆದುಕೊಂಡಿದ್ದರಂತೆ ರಿಶಿಕೇಷ್. ಇಲ್ಲಿಯವರೆಗೂ ಶೂಟ್ ಮಾಡಿರುವ ಹಾರ್ಡ್ ಡಿಸ್ಕ್ ಕೊಡದೆ ಪರಾರಿ’ ಆಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿರ್ಮಾಪಕರು ಕರೆ ಮಾಡಿ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Web Stories