ನಟ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿ (CM Vijay) ಆದ ಬಳಿಕ ಮೊದಲ ಬಾರಿಗೆ ನಟಿ ಸಮಂತಾ (Samantha) ಭೇಟಿಯಾಗಿದ್ದಾರೆ. ಚೆನ್ನೈನಲ್ಲಿರುವ ದಳಪತಿ ನಿವಾಸದಲ್ಲಿ ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಈ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ (Instagram Post) ಹಂಚಿಕೊಂಡಿದ್ದಾರೆ.
ವಿಜಯ್ ಜೊತೆ ಸಮಂತಾ ತಮಿಳಿನ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಥೇರಿ, ಕತ್ತಿ ಹಾಗೂ ಮರ್ಸೆಲ್ ಚಿತ್ರಗಳಲ್ಲಿ ವಿಜಯ್ ಜೊತೆ ಸಮಂತಾ ಕಾಂಬಿನೇಷನ್ನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇದೀಗ ಈ ಅನುಬಂಧ ಚಿತ್ರಗಳಿಗಷ್ಟೇ ಸೀಮಿತವಾಗಿರದೆ ಅದರಾಚೆಗೂ ವ್ಯಾಪಿಸಿದೆ. ‘ಮಾ ಇಂಟಿ ಬಂಗಾರಂ’ ಚಿತ್ರದ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಸಮಂತಾ, ಚೆನ್ನೈಗೆ ತೆರಳಿ ಮೊದಲು ಮಾಡಿರುವ ಕೆಲಸ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದು.
ವಿಜಯ್ ಹಾಗೂ ಸಮಂತಾ ಭೇಟಿಯಾಗಿ ಪರಸ್ಪರ ಕುಶಲೋಪರಿ ಕೇಳಿಕೊಂಡಿದ್ದಾರೆ. ಆ ಕುರಿತ ಫೋಟೋಗಳನ್ನ ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸಿಎಂ ವಿಜಯ್ ಭವಿಷ್ಯದಲ್ಲಿ ಸಿನಿಮಾ ಮಾಡ್ತಾರೋ ಇಲ್ವೋ ಆದರೆ ಸಹಕಲಾವಿದರ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳುತ್ತಾರೆ ಅನ್ನೋದಕ್ಕೆ ಸಮಂತಾ ಜೊತೆಗಿನ ಭೇಟಿಯೇ ಸಾಕ್ಷಿ.ಇದನ್ನೂ ಓದಿ: ಗಿಲ್ಲಿ ಚಿತ್ರದ ನಿರ್ದೇಶಕನಿಗಿದೆ ರಾಕಿಂಗ್ ಸ್ಟಾರ್ ಯಶ್ ನಂಟು
ಕೆಲಸದ ಒತ್ತಡದ ನಡುವೆಯೂ ಸಮಂತಾರನ್ನು ಭೇಟಿಯಾಗಿದ್ದಾರೆ ವಿಜಯ್. ಭೇಟಿ ಬಳಿಕ ಸಮಂತಾ ವಿಜಯ್ ಕುರಿತು ಪ್ರೀತಿಯ ನುಡಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗುವ ಪೂರ್ವದಲ್ಲೂ ವಿಜಯ್ರನ್ನು ಬಲ್ಲ ಸಮಂತಾ ಇದೀಗ ಹಿಂದಿನ ಅವರ ಕಲ್ಪನೆ ಹಾಗೂ ಮುಂದಿನ ಯೋಜನೆಯ ಕುರಿತು ಬರೆದಿದ್ದಾರೆ.
ವಿಜಯ್ ಬಗ್ಗೆ ಸಮಂತಾ ನುಡಿ
ನಮ್ಮ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲಿದ್ದೇನೆ ಎಂಬ ವಿಚಾರವೇ ನನ್ನ ಮನಸ್ಸಿನಲ್ಲಿ ಅಪಾರ ಸಂತೋಷವನ್ನು ಮೂಡಿಸಿತ್ತು. ವಿಜಯ್ ಸರ್ ಅವರು ಕೇವಲ ಚಿತ್ರರಂಗದ ನಾಯಕನಾಗಿಯೇ ಉಳಿಯುವ ವ್ಯಕ್ತಿ ಅಲ್ಲ ಎಂದು ನಾನು ಯಾವಾಗಲೂ ಭಾವಿಸುತ್ತಿದ್ದೆ. ಅವರಲ್ಲಿರುವ ಶಕ್ತಿ, ವ್ಯಕ್ತಿತ್ವ ಮತ್ತು ಜನರು ಅವರಿಗೆ ನೀಡುವ ಪ್ರತಿಕ್ರಿಯೆಯನ್ನು ನೋಡಿದರೆ, ಅವರು ಇನ್ನೂ ದೊಡ್ಡ ಉದ್ದೇಶಕ್ಕಾಗಿ ಹುಟ್ಟಿದವರಂತೆ ಅನಿಸುತ್ತಿದೆ. ಈಗಾಗಲೇ ತಾವು ಸಾಧಿಸಿರುವ ಕ್ಷೇತ್ರವನ್ನು ಬಿಟ್ಟು, ಅದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಮತ್ತು ಸವಾಲುಗಳಿರುವ ದಾರಿಯನ್ನು ಆರಿಸಿಕೊಳ್ಳುವುದು ನಿಜಕ್ಕೂ ಅಸಾಮಾನ್ಯ. ಅದು ಸುಲಭವಾದದ್ದು ಅಂತ ಅವರು ಒಪ್ಪಿಕೊಂಡಿರಲ್ಲ. ಬದಲಾವಣೆಯನ್ನು ತರಬಹುದು ಎಂಬ ನಂಬಿಕೆಯಿಂದ ಹೊಸ ಕ್ಷೇತ್ರಕ್ಕೆ ಬಂದಿದ್ದಾರೆ.
View this post on Instagram
ನನ್ನ ಅಭಿಪ್ರಾಯದಲ್ಲಿ, ಜೀವನದಲ್ಲಿ ಒಂದಲ್ಲೊಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಬಗ್ಗೆ ಮಾತ್ರವಲ್ಲ, ಸಮಾಜಕ್ಕೆ ತಾವು ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಯೋಚಿಸುವ ಅವಕಾಶ ಸಿಗುತ್ತದೆ. ಆದರೆ ಹಲವರು ಆ ದಾರಿಯನ್ನು ಸ್ವೀಕರಿಸುವುದಿಲ್ಲ. ವಿಜಯ್ ಸರ್ ತಮ್ಮ ಹುದ್ದೆಯನ್ನು ಸ್ಪಷ್ಟ ಉದ್ದೇಶ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಾರೆ ಎಂಬ ನಂಬಿಕೆ ಇದೆ. ಇದರಿಂದ ಜನರನ್ನೇ ಮತ್ತೊಮ್ಮೆ ಆಶ್ಚರ್ಯಪಡಿಸುತ್ತಾರೆ ಎಂಬ ಭರವಸೆ ನನಗಿದೆ. ಅವರಿಗೆ ಶಕ್ತಿ, ಜ್ಞಾನ ಮತ್ತು ತಮ್ಮ ಮಾರ್ಗದಲ್ಲಿ ದೃಢವಾಗಿ ಮುಂದುವರಿಯುವ ಧೈರ್ಯ ದೊರಕಲಿ ಎಂದು ಹಾರೈಸುತ್ತೇನೆ. ಅವರನ್ನು ನೋಡುತ್ತಿರುವ ಪ್ರತಿಯೊಬ್ಬ ಯುವಕರಿಗೂ ಇದು ಒಂದು ಗುರುತಾಗಲಿ.. ಜೀವನವು ನಾವು ಆರಂಭದಲ್ಲಿ ಕಂಡ ಕನಸಿಗಿಂತಲೂ ಬಹಳ ದೊಡ್ಡದಾಗಿರಬಹುದು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ, ಕೃತಿ ಸನೋನ್!
