ಬೆಳಗಾವಿ: ಇಡೀ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿದ್ದಕ್ಕೆ ತೀವ್ರ ಹರ್ಷ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ಇದು ಭಾರತೀಯ ವಿಜ್ಞಾನಿಗಳ ತಾಕತ್ತು. ಅವರಿಗೆ ನನ್ನ ಕೋಟಿ ಕೋಟಿ ವಂದನೆಗಳು, ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟ ಕುರಿತು ಮಾತನಾಡಿದ ಅವರು, ಇಸ್ರೋ (ISRO) ಭಾರತದ ಹೆಮ್ಮೆಯ ಸಂಸ್ಥೆ. ಈ ಹಿಂದೆ ಕೂಡಾ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಈಗ ಚಂದ್ರಯಾನದ ಯಶಸ್ಸು ಇಡೀ ವಿಶ್ವವೇ ಭಾರತವನ್ನು ಮತ್ತೊಮ್ಮೆ ಕೊಂಡಾಡುವಂತೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಇಸ್ರೋ ಹೆಮ್ಮೆ ತಂದು ಕೊಟ್ಟಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಭಾರತ ಬಾಹ್ಯಾಕಾಶ ಲೋಕದ ಲೀಡರ್ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ- 3 ಸಕ್ಸಸ್: ಇಸ್ರೋಗೆ ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ
ಚಂದ್ರಯಾನದ ಈ ಯಶಸ್ಸು ವಿಜ್ಞಾನ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಿಗೆ ಕಾರಣೀಭೂತವಾಗಲಿದೆ. ಈ ಮಹತ್ಸಾಧನೆಗಾಗಿ ಮತ್ತೊಮ್ಮೆ ಎಲ್ಲಾ ವಿಜ್ಞಾನಿಗಳನ್ನು, ಇಡೀ ದೇಶದ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Chandrayaan-3: ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಟ್ಟ ಮೊದಲ ದೇಶ ಭಾರತ
Web Stories